ವಿದೇಶದಲ್ಲಿರುವ ಕಪ್ಪು ಹಣ ಮರಳಿ ತಂದ್ರೆ ಮಾತ್ರ ಬೆಂಬಲ: ಬಾಬಾ ರಾಮದೇವ್
ನವದೆಹಲಿ , ಶನಿವಾರ, 4 ಜನವರಿ 2014 (13:35 IST)
ದೇಶದ ಭ್ರಷ್ಟ ವ್ಯಕ್ತಿಗಳು ವಿದೇಶದಲ್ಲಿಟ್ಟಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವು ಭರವಸೆ ನೀಡಿದಲ್ಲಿ ಮಾತ್ರ ನರೇಂದ್ರ ಮೋದಿಗೆ ಬೆಂಬಲ ನೀಡಲಾಗುವುದು ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಕೆಲ ವಿಷಯಾಧಾರಿತ ಷರತ್ತುಗಳ ಮೇಲೆ ಬೆಂಬಲ ನೀಡುತ್ತೇನೆ. ವಿದೇಶದಲ್ಲಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವ ಬಗ್ಗೆ ಖಚಿತ ಭರವಸೆ ನೀಡಬೇಕು ಎಂದು ಸವಾಲ್ ಹಾಕಿದ್ದಾರೆ.ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ವಿನಾಶಕಾರಿಯಾಗಿದೆ. ಆದರೆ, ಪ್ರದಾನಿ ಮೋದಿಯವರನ್ನು ವಿನಾಶಕಾರಿ ಎಂದಿರುವುದು ವಿಷಾದಕರದ ಸಂಗತಿಯಾಗಿದೆ ಎಂದು ತಿರುಗೇಟು ನೀಡಿದರು.ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಎಲ್ಲಾ ತೆರಿಗೆಗಳನ್ನು ರದ್ದುಪಡಿಸಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶ ಹಣದುಬ್ಬರ ಎದುರಿಸುತ್ತಿದೆ.ಭ್ರಷ್ಟಾಚಾರವನ್ನು ತಡೆಯಲು ಬ್ಯಾಂಕ್ ವಹಿವಾಟು ತೆರಿಗೆಯನ್ನು ಮಾತ್ರ ಹೇರಬೇಕು. ಕೇವಲ ಶೇ.1 ರಷ್ಟು ತೆರಿಗೆ ಹೆಚ್ಚಿಸಿದಲ್ಲಿ ಕೇಂದ್ರ ಸರಕಾರಕ್ಕೆ 15 ಲಕ್ಷ ಕೋಟಿ ರೂಪಾಯಿ ಆದಾಯ ದೊರೆಯಲಿದೆ ಎಂದರು. ಕೇಂದ್ರ ಸರಕಾರ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಹಿಂದಕ್ಕೆ ಪಡೆದಲ್ಲಿ ಹಣದುಬ್ಬರ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಯೋಗ ಗುರು ಬಾಬಾ ರಾಮದೇವ್ ಸಲಹೆ ನೀಡಿದ್ದಾರೆ.