ಚುನಾವಣೆಯಲ್ಲಿ ಚಿತ್ರ ವಿಚಿತ್ರ ಸುದ್ದಿಗಳದೆ ಕಂತೆ. ರೋಹ್ಟಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್ ಧನಕರ್, ಕಾಂಗ್ರೆಸ್ ಪಕ್ಷ ಆಯೋಜಿಸಿದ ಸಭೆಯಲ್ಲಿ ಭಾಷಣ ಬಿಗಿದ ವಿಚಿತ್ರ ಘಟನೆ ವರದಿಯಾಗಿದೆ.
ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ದೀಪಿಂದರ್ ಹೂಡಾ ಅವರಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ಪಕ್ಷದ ಮುಖಂಡ ಕುನಾಲ್ ಭಾಡು ಸಭೆಯನ್ನು ಆಯೋಜಿಸಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸಾವಿರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಖಂಡ ಕುನಾಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ದೀಪಿಂದರ್ ಹೂಡಾ ಅವರಿಗಾಗಿ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ಯಾರು ಇರಲಿಲ್ಲ. ಕಾಂಗ್ರೆಸ್ ಮುಖಂಡರಾದ ಕುನಾಲ್ ಮತ್ತು ದೀಪಿಂದರ್ ತಿರುಗಿ ವೇದಿಕೆಗೆ ಆಗಮಿಸುವ ಮುನ್ನವೇ ತಮ್ಮ ಬೆಂಬಲಿಗರೊಂದಿಗೆ ವೇದಿಕೆಯನ್ನು ಎರಿದ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್ ಭಾಷಣ ಆರಂಭಿಸಿಯೇ ಬಿಟ್ಟರು.
ವೇದಿಕೆಯ ಮುಂಬಾಗದಲ್ಲಿದ್ದ ಕೆಲವರು ಇದು ಕಾಂಗ್ರೆಸ್ ಪಕ್ಷದ ವೇದಿಕೆ ಎಂದು ಜೋರಾಗಿ ಕೂಗುತ್ತಿದ್ದರೂ ಬಿಜೆಪಿ ಅಭ್ಯರ್ಥಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರು ಭಾಷಣ ನೀಡುವಲ್ಲಿಯೇ ಮಗ್ನರಾಗಿದ್ದರು.
ಸುಮಾರು 15 ನಿಮಿಷಗಳ ಕಾಲ ಭಾಷಣ ಮಾಡಿದ ರೋಹ್ಟಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್ ಧನಕರ್, ನಗುಮುಖದಿಂದ ವೇದಿಕೆ ಇಳಿದು ಹೊರಟೇ ಬಿಟ್ಟರು. ನಂತರ ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಅಭ್ಯರ್ಥಿಯ ಬಗ್ಗೆ ಮಾಹಿತಿ ನೀಡಿದಾಗ ಲಘುವಾಗಿ ತೆಗೆದುಕೊಂಡರು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.