ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳಿಗೆ ಕುಸಿಯಲಿದೆ: ಎಲ್.ಕೆ. ಆಡ್ವಾಣಿ ಭವಿಷ್ಯ
ನವದೆಹಲಿ , ಮಂಗಳವಾರ, 17 ಡಿಸೆಂಬರ್ 2013 (20:04 IST)
ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನುಭವಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎರಡಂಕಿಗೆ ಕುಸಿಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮತದಾರರನ್ನು ಖರೀದಿಸುವ ಪ್ರಯತ್ನಗಳ ಮಧ್ಯೆಯೂ ತುರ್ತುಪರಿಸ್ಥಿತಿಯ ನಂತರ ಮೊದಲ ಬಾರಿಗೆ ಇಂತಹ ಹೀನಾಯ ಸೋಲನುಭವಿಸಿದೆ ಎಂದು ಆಡ್ವಾಣಿ ಬ್ಲಾಗ್ನಲ್ಲಿ ದಾಖಲಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಗಢ್ ಮತ್ತು ದೆಹಲಿ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನುಭವಿಸಿತ್ತು. ಭ್ರಷ್ಟಾಚಾರ, ಹಣದುಬ್ಬರ , ಕಪ್ಪುಹಣ ಸೇರಿದಂತೆ ಹಲವಾರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೆಲವೇ ಕೆಲ ಸ್ಥಾನಗಳಿಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಇದೀಗ ಅಂತ್ಯವಾಗಿದೆ. ಮುಂದಿನ ವರ್ಷ ನಡೆಯಲಿರುವ ಮಹಾ ಚುನಾವಣೆ ಯುದ್ಧದಲ್ಲಿ ಸೋನಿಯಾ- ಮನಮೋಹನ್ ಸರಕಾರದ ಹಣೆಬರಹ ನಿರ್ಧರಿಸಲಿದೆ ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.