ರಾಜಕೋಟ್: ದೇಶೀಯ ಕರೆನ್ಸಿ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಎರಡೂ ಮೂಕವಾಗಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರ ಪ್ರಧಾನಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಒಂದು ಕಾಲದಲ್ಲಿ ಭಾರತದ ರೂಪಾಯಿ ಭಾರೀ ಸದ್ದು ಮಾಡ್ತಿತ್ತು. ಆದರೆ ಇಂದು ಅದರ ಧ್ವನಿ ಉಡುಗಿಹೋಗಿದೆ. ಇದೇ ರೀತಿ ಪ್ರಧಾನಿ ಧ್ವನಿ ಕೂಡ ಸರಿಯಾಗಿ ಕೇಳುವುದಿಲ್ಲ. ಎರಡೂ ಮೂಕವಾಗಿವೆ ಎಂದು ಸೌರಾಷ್ಟ್ರ ಪ್ರದೇಶದಲ್ಲಿ ಹೇಳಿದ್ದಾರೆ. ರಾಜಕೋಟ್ನಿಂದ ಪ್ರತ್ಯೇಕ ಜಿಲ್ಲ ಮಾರ್ಬಿಯನ್ನು ಸೃಷ್ಟಿಸಿದ್ದಕ್ಕಾಗಿ ಅವರಿಗೆ ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮತ್ತು ಪಾಕಿಸ್ತಾನ, ಚೀನಾ ಜತೆ ಬಿಕ್ಕಟ್ಟು ಮುಂತಾದ ಅನೇಕ ವಿಷಯಗಳ ಬಗ್ಗೆ ಮೋದಿ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದರು. ರೂಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅವರು ಇಂದು ನಮ್ಮ ಕರೆನ್ಸಿ ಮೃತ್ಯುಶಯ್ಯೆಯಲ್ಲಿದೆ. ಇದು ಸಾವಿನ ಅಂಚಿನಲ್ಲಿದ್ದು, ವೈದ್ಯರ ಚಿಕಿತ್ಸೆ ತುರ್ತಾಗಿ ಆಗಬೇಕಿದೆ ಎಂದು ಮೋದಿ ಹೇಳಿದರು.