ನವದೆಹಲಿ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣವನ್ನು ಸಾಂವಿಧಾನ ಪೀಠಕ್ಕೆ ಸುಪ್ರೀಂಕೋರ್ಟ್ ವರ್ಗಾಯಿಸಿದೆ. ರಾಜೀವ್ ಗಾಂಧಿಯ ಮೂವರು ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ನಿರ್ಧರಿಸಿತ್ತು. ಆದರೆ ಸಾಂವಿಧಾನ ಪೀಠಕ್ಕೆ ವರ್ಗಾಯಿಸಿರುವುದರಿಂದ ತೀರ್ಪು ಬರುವವರೆಗೆ ಕೈದಿಗಳು ಜೈಲಿನಲ್ಲೇ ಇರಬೇಕಾಗುತ್ತದೆ. ಇದರಿಂದ ತಮಿಳುನಾಡು ಸರ್ಕಾರಕ್ಕೆ ಮುಖಭಂಗವಾಗಿದೆ.
ಸುಪ್ರೀಂಕೋರ್ಟ್ ಎರಡೂ ಕಡೆಯ ವಾದವಿವಾದಗಳನ್ನು ಆಲಿಸಿ, ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿರುವುದರಿಂದ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಸಾಂವಿಧಾನಿಕ ಪೀಠ ಏಳು ಅಂಶಗಳನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮುರುಗನ್, ಪೆರಾರಿವಲನ್ , ಸಂತನ್, ನಳಿನಿ ಈ ನಾಲ್ವರು ಆರೋಪಿಗಳು ಸಾಂವಿಧಾನಿಕ ಪೀಠದ ತೀರ್ಪು ಬರುವವರೆಗೆ ಜೈಲಿನಲ್ಲೇ ಇರಬೇಕಾಗುತ್ತದಾದ್ದರಿಂದ ಹಂತಕರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲವೆನ್ನಲಾಗಿದೆ.