ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಬಗ್ಗೆ ವಿಷಾದವಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯಿಂದ ವಾಸ್ತವತೆ ಬದಲಾಗುವುದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಮುಂಬರುವ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಇಮೇಜ್ ಬದಲಾಯಿಸಿಕೊಳ್ಳುವ ವಿಫಲ ಪ್ರಯತ್ನವನ್ನು ಮೋದಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಕಿಡಿಕಾರಿದ್ದಾರೆ.
ಕೇವಲ ವಿಷಾದ ಯಾಚಿಸುವುದರಿಂದ ಕ್ಷಮೆ ಕೋರುವುದರಿಂದ ಗುಜರಾತ್ ದಂಗೆಯ ವಾಸ್ತವತೆ ಬದಲಾಗುವುದಿಲ್ಲ. ದಂಗೆಯಲ್ಲಿ ಸಾವನ್ನಪ್ಪಿದ ಜನರ ಜೀವ ಮರಳಿ ಬರುವುದಿಲ್ಲ ಎಂದು ಗುಡುಗಿದ್ದಾರೆ.
2002 ರಲ್ಲಿ ನಡೆದ ದಂಗೆಯಲ್ಲಿ ನರೇಂದ್ರ ಮೋದಿ ನೇರವಾಗಿ ಜವಾಬ್ದಾರರಲ್ಲವಾಗಿರಬಹುದು. ಆದರೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ದಂಗೆಯನ್ನು ನಿಯಂತ್ರಿಸಬಹುದಿತ್ತು ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.