ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲವಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪ್ರಧಾನಿ ಪಟ್ಟ ಬೇಡ ಎಂದು ಹೇಳಿಕೆ ನೀಡಿದ್ದ ಅಮಾರ್ತ್ಯ ಸೇನ್ ವಿರುದ್ಧ ಬಿಜೆಪಿ ಗುಡುಗಿ ಭಾರತ್ ರತ್ನ ಪ್ರಶಸ್ತಿ ವಾಪಸ್ ನೀಡುವಂತೆ ಒತ್ತಾಯಿಸಿದೆ.
ಮೋದಿ ವಿರುದ್ಧ ಹೇಳಿಕೆ ನೀಡಿದ್ದ ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿ ವಾಪಸ್ ನೀಡುವಂತೆ ಬಿಜೆಪಿ ಒತ್ತಾಯಿಸಿರುವುದು ಫ್ಯಾಸಿಸ್ಟ್ ಧೋರಣೆ ತೋರುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಮಾಜಿ ಪ್ರಧಾನಿ ವಾಜಪೇಯಿ ನನಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದಾರೆ. ಒಂದು ವೇಳೆ ವಾಜಪೇಯಿ ಪ್ರಶಸ್ತಿ ಹಿಂತಿರುಗಿಸುವಂತೆ ಹೇಳಿದಲ್ಲಿ ಖಂಡಿತವಾಗಿ ಹಿಂತಿರುಗಿಸುತ್ತೇನೆ ಎಂದು ಅಮಾರ್ತ್ಯ ಸೇನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಯಶ್ವಂತ್ ಸಿನ್ಹಾ, ಜಸ್ವಂತ್ ಸಿಂಗ್ ಮತ್ತು ಅರುಣ್ ಜೇಟ್ಲಿಯವರೊಂದಿಗೆ ಕೋಮುವಾದದ ಬಗ್ಗೆ ಚರ್ಚಿಸಿರುವುದಾಗಿ ಸೇನ್ ತಿಳಿಸಿದ್ದಾರೆ.
ಬಿಜೆಪಿ ಸಂಸದ ಚಂದನ್ ಮಿತ್ರಾ ಮಾತನಾಡಿ, ಸೇನ್ ಭಾರತ ರತ್ನ ಪ್ರಶಸ್ತಿಯನ್ನು ಮರಳಿಸಬೇಕು. ಭಾರತದಲ್ಲಿ ಮತದಾನ ಮಾಡಲು ಹಕ್ಕಿಲ್ಲದ ವ್ಯಕ್ತಿಯೊಬ್ಬ ಯಾವುದೋ ಪಕ್ಷ ಅಥವಾ ನಾಯಕನ ವಿರುದ್ಧ ಆರೋಪ ಮಾಡುತ್ತಿರುವುದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.