ಜಲಾಶಯದಲ್ಲಿ ನೀರಿಲ್ಲದಿದ್ದರೆ ಮೂತ್ರ ಮಾಡಿ ತುಂಬಿಸಲಾಗುತ್ತದೆಯೇ ಎಂದು ಕೀಳು ಅಭಿರುಚಿಯ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಎನ್ಸಿಪಿ ವರಿಷ್ಠ ಶರದ್ ಪವಾರ್ ಸಾರ್ವಜನಿಕವಾಗಿ ಅಸಮಾಧಾನ ಹೊರಗೆಡವಿದ ಬಳಿಕ, ಒಂದು ದಿನದ ಉಪವಾಸ ಪ್ರಾಯಶ್ಚಿತ್ತವನ್ನು ನಡೆಸಿದ್ದಾರೆ.
ತಮ್ಮ ಕೆಲವು ಆಯ್ದ ಬೆಂಬಲಿಗರೊಂದಿಗೆ ಭಾನುವಾರ ಮುಂಜಾನೆ ಕರ್ಹಾಡ್ನ ಮಾಜಿ ಮುಖ್ಯಮಂತ್ರಿ ಯಶವಂತ ರಾವ್ ಚವಾಣರ ಸಮಾಧಿಯ ಬಳಿ ನಡೆದು, ಒಂದು ದಿನದ ಉಪವಾಸ ಕೈಗೊಂಡರು. ಇದು ಪ್ರಚಾರ ತಂತ್ರವಲ್ಲ. ಎಲ್ಲ ರಾಜಕಾರಣಿಗಳೂ ಜವಾಬ್ದಾರಿಯಿಂದ ಮಾತನಾಡಬೇಕೆಂಬುದು ತನಗೀಗ ಅರ್ಥವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಅಚ್ಚರಿಯ ಬೆಳೆವಣಿಗೆಯೊಂದರಲ್ಲಿ ಮುಂಬೈಯಲ್ಲಿದ್ದ ಅಜಿತ್ ಕರ್ಹಾಡ್ಗೆ ಹೋಗಲು ನಿರ್ಧರಿಸಿದರು. ತನ್ನ ಹೇಳಿಕೆಯ ಕುರಿತು ಶರದ್ ಪವಾರ್ ಕಠಿಣ ಶಬ್ದಗಳಿಂದ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಕೆಲವೇ ನಿಮಿಷಗಳಲ್ಲಿ ಅವರು ಈ ನಿರ್ಧಾರ ಕೈಗೊಂಡರು. ಅಜಿತ್ರ ಕರ್ಹಾಡ್ ಭೇಟಿಯನ್ನು ಅತ್ಯಂತ ಗುಪ್ತವಾಗಿರಿಸಲಾಗಿತ್ತು.