ನವದೆಹಲಿ: ತೆಲಂಗಾಣದ ಪ್ರಥಮ ಮುಖ್ಯಮಂತ್ರಿಯಾಗಿ ತಮ್ಮ ಮುಖಂಡ ಕೆ.ಚಂದ್ರಶೇಖರ್ ರಾವ್ ಅವರಿಗೆ ಬೆಂಬಲ ನೀಡಿದರೆ ಹೊಸ ರಾಜ್ಯದಲ್ಲಿ ಲೋಕಸಭೆ ಸ್ಥಾನಗಳ ಸಿಂಹಪಾಲನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಸಿದ್ಧವಿರುವುದಾಗಿ ತೆಲಂಗಾಣ ರಾಷ್ಟ್ರ ಸಮಿತಿ ಇಂಗಿತ ವ್ಯಕ್ತಪಡಿಸಿದೆ. ಎರಡೂ ಕಡೆಯಿಂದ ಔಪಚಾರಿಕ ಮಾತುಕತೆ ನಡೆದಿಲ್ಲವಾದರೂ, ತೆಲಂಗಾಣ ರಾಜ್ಯ ರಚನೆಗೆ ಒತ್ತಡ ಹಾಕಿದ್ದ ರಾವ್ ತಮ್ಮ ನಿಲುವು ಏನೆಂಬ ಬಗ್ಗೆ ಸಾಕಷ್ಟು ಸುಳಿವುಗಳನ್ನು ನೀಡಿದ್ದಾರೆ. ರಾವ್ ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರನ್ನು ಭೇಟಿ ಮಾಡಿದರೂ ಯಾವುದೇ ರಾಜಕೀಯ ಚರ್ಚಿಸಲಿಲ್ಲ.
ನಂತರ ಕೆಸಿಆರ್ ತಮ್ಮ ಪಕ್ಷದ ಸಹೋದ್ಯೋಗಿ ಕೆ.ಕೇಶವ ರಾವ್ ಜತೆ ದಿಗ್ವಿಜಯ್ ಸಿಂಗ್ ಅವರಿಗೆ ಕರೆ ಮಾಡಿ ಟಿಆರ್ಎಸ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿಯ ವಿಧಿವಿಧಾನದ ಬಗ್ಗೆ ವಿವರಿಸಿದರು.