ಸುಮಾರು 6 ಮಂದಿ ಮಂಗಳಮುಖಿಯರಿಗೆ ಹೋಂಗಾರ್ಡ್ ಉದ್ಯೋಗ ನೀಡಲಾಗಿದ್ದು, ಮೊದಲ ಬಾರಿಗೆ ದೇಶದಲ್ಲಿ ಇಂತಹ ಹೊಸ ಪ್ರಯತ್ನ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸರಕಾರ ಆರಂಭಿಸಿದೆ.
ಹೋಂಗಾರ್ಡ್ ಹುದ್ದೆಗಳಿಗಾಗಿ ಆರು ಮಂದಿ ಮಂಗಳಮುಖಿಯರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ನಂತರ ಅವರನ್ನು ನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಮಂಗಳಮುಖಿಯರಿಗೆ ಪೊಲೀಸ್ ಯುನಿಫಾರ್ಮ್ ನೀಡಲಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಅಪರಾಧವನ್ನು ತಡೆಯುವ ಕಾರ್ಯಕ್ಕೆ ನೇಮಿಸಲಾಗಿದೆ. ಮಂಗಳಮುಖಿಯರಿಗೆ ಹೋಂಗಾರ್ಡ್ ಕೆಲಸ ನೀಡಿದ ಮೊದಲ ರಾಜ್ಯ ತಮಿಳುನಾಡು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳಮುಖಿಯರಿಗೆ ಸಂಘದ ಮುಖ್ಯಸ್ಥೆಯಾದ ಭಾರತಿ ಕನ್ನಮ್ಮಾ ಮಾತನಾಡಿ, ಮಂಗಳಮುಖಿಯರಿಗೆ ಉದ್ಯೋಗ ನೀಡಿರುವುದಕ್ಕೆ ಅಭಿನಂಧನೆಗಳು. ಮಹಿಳೆಯರೊಂದಿಗೆ ಅಥವಾ ಪುರುಷರೊಂದಿಗೆ ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುವ ಸಾಮರ್ಥ ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.