Select Your Language

Notifications

webdunia
webdunia
webdunia
webdunia

'ಭ್ರಷ್ಟ' ಸಿವಿಸಿ ಥಾಮಸ್‌ಗೆ ಕೊಕ್ ಕೊಡಲಿದೆಯೇ ಕೇಂದ್ರ?

'ಭ್ರಷ್ಟ' ಸಿವಿಸಿ ಥಾಮಸ್‌ಗೆ ಕೊಕ್ ಕೊಡಲಿದೆಯೇ ಕೇಂದ್ರ?
ನವದೆಹಲಿ , ಮಂಗಳವಾರ, 30 ನವೆಂಬರ್ 2010 (12:52 IST)
ಪಿ.ಜೆ. ಥಾಮಸ್ ಹೆಸರು 2ಜಿ ಹಗರಣದಲ್ಲಿ ಕೇಳಿ ಬಂದಿರುವ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ವಿಪಕ್ಷಗಳೊಂದಿಗೆ ಜಿದ್ದಿಗೆ ಬಿದ್ದು ಕೇಂದ್ರೀಯ ಜಾಗೃತ ದಳದ (ಸಿವಿಸಿ) ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ ನಂತರ ತೀವ್ರ ಅಪಮಾನಕ್ಕೊಳಗಾದ ಕೇಂದ್ರ, ಇದೀಗ ಥಾಮಸ್ ರಾಜೀನಾಮೆ ಕೊಡಿಸುವ ತಂತ್ರಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಥಾಮಸ್ ಹೆಸರು ಕೇಳಿ ಬಂದ ನಂತರವೂ ತನಿಖಾ ಸಂಸ್ಥೆ ಸಿವಿಸಿಗೆ (ಕೇಂದ್ರೀಯ ಜಾಗೃತ ದಳ ಆಯುಕ್ತ) ನೇಮಕಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ವಾರಗಳ ಬಳಿಕ ಇಂತಹ ಬೆಳವಣಿಗೆ ಕಾಣಿಸಿಕೊಂಡಿದೆ. ಇಂತಹ ಭ್ರಷ್ಟರನ್ನು ತನಿಖಾ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದು ಹೇಗೆ ಎಂಬುದನ್ನು ವಿವರಿಸಬೇಕು ಎಂದು ಕೋರ್ಟ್ ಸೂಚನೆ ನೀಡಿರುವುದರಿಂದ, ಮುಜುಗರ ತಪ್ಪಿಸಲು ಸರಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.

ಸುಪ್ರೀಂ ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಿಗೆ ಯುಪಿಎ ಸರಕಾರದ ಹಿರಿಯ ಅಧಿಕಾರಿಗಳು ಥಾಮಸ್ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ತಾವು ಸಿವಿಸಿ ಆಯುಕ್ತರ ಹುದ್ದೆಯನ್ನು ತ್ಯಜಿಸಿದರೆ ಸರಕಾರ ಮತ್ತಷ್ಟು ಮುಜುಗರದಿಂದ ಪಾರಾಗಬಹುದು ಎಂದು ಸಲಹೆ ನೀಡಲಾಗುತ್ತಿದೆ.

ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಥಾಮಸ್ ಅವರು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಥಾಮಸ್ ಅವರನ್ನು ಸಿವಿಸಿ ಆಯುಕ್ತರನ್ನಾಗಿ ನೇಮಕ ಮಾಡಿದ ತ್ರಿಸದಸ್ಯ ಸಮಿತಿಯಲ್ಲಿ ಚಿದಂಬರಂ ಕೂಡ ಇದ್ದರು. ಈ ನೇಮಕವನ್ನು ಬಿಜೆಪಿ ಸೇರಿದಂತೆ ಕೆಲವು ಪ್ರತಿಪಕ್ಷಗಳು ತಿರಸ್ಕರಿಸಿದ್ದವು.

ದೂರಸಂಪರ್ಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪಗಳಿಗೊಳಗಾಗಿದ್ದ ಥಾಮಸ್ ಅವರನ್ನು ಇದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸಿವಿಸಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಕೇರಳದಲ್ಲಿನ ಕ್ರಿಮಿನಲ್ ಪ್ರಕರಣದಲ್ಲೂ ಥಾಮಸ್ ಹೆಸರು ದಾಖಲಾಗಿತ್ತು.

Share this Story:

Follow Webdunia kannada