'ನಿಮ್ಮ ಚುನಾವಣೆ ಪ್ರಚಾರಕ್ಕೆ ಮುಖೇಶ್ ಅಂಬಾನಿ ಫಂಡ್ ನೀಡ್ತಿರೋದು ನಿಜವೇ?'
, ಶುಕ್ರವಾರ, 21 ಫೆಬ್ರವರಿ 2014 (14:44 IST)
ನವದೆಹಲಿ: ಮುಖೇಶ್ ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡುವ ಕೇಂದ್ರಸರ್ಕಾರದ ಅನಿಲ ದರ ಏರಿಕೆ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿಗೆ ಕೂಡ ಇದೇ ರೀತಿಯ ಪತ್ರ ಬರೆದು, ವಿವಿಧ ಭಾಷೆಗಳಲ್ಲಿ ಪತ್ರದ 10 ಕೋಟಿ ಪ್ರತಿಗಳನ್ನು ದೇಶಾದ್ಯಂತ ವಿತರಣೆ ಮಾಡುವುದಾಗಿ ತಿಳಿಸಿದರು. ರಿಲಯನ್ಸ್ ಅಧ್ಯಕ್ಷರ ಜತೆ ನಂಟಿನ ಬಗ್ಗೆ ಮೋದಿಯ ಮೌನವನ್ನು ಟೀಕಿಸುತ್ತಿದ್ದ ಕೇಜ್ರಿವಾಲ್ ಮೋದಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಸುದ್ದಿ ಮಾಡಿದ್ದಾರೆ. ಮುಖೇಶ್ ಅಂಬಾನಿ ಜತೆ ನಿಮ್ಮ ಮತ್ತು ಪಕ್ಷದ ಸಂಬಂಧವೇನು. ನಿಮ್ಮ ಚುನಾವಣೆ ಪ್ರಚಾರಕ್ಕೆ ಆರ್ಥಿಕ ನೆರವು ನೀಡುತ್ತಿರುವುದು ಯಾರು. ಕೆಲವರು ಮುಖೇಶ್ ಅಂಬಾನಿ ಎಂದು ಹೇಳ್ತಾರೆ. ಇದು ನಿಜವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ನೀವು, ರಾಹುಲ್ ಗಾಂಧಿ ಖಾಸಗಿ ಹೆಲಿಕಾಪ್ಟರ್ ಬಳಸುತ್ತೀರಿ. ಇದು ನಿಮಗೆ ಉಚಿತವಾಗಿ ಸಿಗುತ್ತದೆಯೇ ಅಥವಾ ಅದಕ್ಕೆ ಹಣ ಪಾವತಿ ಮಾಡಬೇಕೇ ಎಂದು ಪ್ರಶ್ನಿಸಿದರು.
ಮುಖೇಶ್ ಅಂಬಾನಿ ಕಂಪೆನಿ ಒಂದು ಯೂನಿಟ್ ಅನಿಲದ ಉತ್ಪಾದನೆಗೆ ಒಂದು ಡಾಲರ್ ಖರ್ಚು ಮಾಡಿದರೆ ಕೇಂದ್ರ ಸರ್ಕಾರ ಅನಿಲದ ದರವನ್ನು ಒಂದು ಯೂನಿಟ್ಗೆ 8 ಡಾಲರ್ಗೆ ಏರಿಸಿತು. ಇದು ದೇಶಕ್ಕೆ ವಾರ್ಷಿಕ 54,000 ಕೋಟಿ ರೂ. ನಷ್ಟ. ಬಿಜೆಪಿ ಮಾತ್ರ ಈ ಕುರಿತು ಮೌನವಹಿಸಿದೆ ಎಂದು ಕೇಜ್ರಿವಾಲ್ ಟೀಕಿಸಿದರು.ಕೇಜ್ರಿವಾಲ್ ರಾಜೀನಾಮೆಗೆ ಮುನ್ನ,ಅಂಬಾನಿ, ವೀರಪ್ಪ ಮೊಯ್ಲಿ ವಿರುದ್ದ ಎಫ್ಐಆರ್ ದಾಖಲಿಸಿ, ದೇಶದಲ್ಲಿ ಅನಿಲದ ಕೃತಕ ಅಭಾವವನ್ನು ಸೃಷ್ಟಿಸಿ ಬೆಲೆ ಏರಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಎಫ್ಐಆರ್ ವಿರುದ್ಧ ಸೇಡಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕೈಗೂಡಿಸಿ ಜನಲೋಕಪಾಲವನ್ನು ವಿರೋಧಿಸಿದವು ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಮೂರು ದಿನಗಳ ಕೆಳಗೆ ನಾವು ಅಂಬಾನಿ ವಿರುದ್ಧ ಎಫ್ಐಆರ್ ದಾಖಲಿಸಿದ ಬಳಿಕ ಅವರು ಮಸೂದೆಯನ್ನು ಸೋಲಿಸಿದರು ಎಂದು ಅವರು ವಾಗ್ದಾಳಿ ಮಾಡಿದರು.