ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಮಂತ್ರಿಯಾಗುವ ಅರ್ಹತೆಯಿದೆ. ಬಿಜೆಪಿ ಮತ್ತು ಜೆಡಿಯು ಮಧ್ಯೆ ಮತ್ತೆ ಸಹಮತ ಮೂಡಬೇಕು ಎನ್ನುವುದೇ ನನ್ನ ಬಯಕೆಯಾಗಿದೆ ಎಂದು ಬಾಲಿವುಡ್ ನಟ- ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಹೇಳಿದ್ದಾರೆ.
ದೇಶದಲ್ಲಿ ಕೆಲವೇ ಕೆಲ ಯಶಸ್ವಿ ಮುಖ್ಯಮಂತ್ರಿಗಳಲ್ಲಿ ನಿತೀಶ್ ಸ್ಥಾನ ಪಡೆದಿದ್ದಾರೆ. ಪ್ರಧಾನಿ ಹುದ್ದೆ ಅಲಂಕರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಸಿನ್ಹಾ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಮ್ಮ ಅನಿಸಿಕೆಗಳು ಯಾವುದೇ ರೀತಿಯಾಗಿರಲಿ ಕೊನೆಗೆ ಪಕ್ಷ ಆಯ್ಕೆ ಮಾಡಿದ ವ್ಯಕ್ತಿ ಪ್ರಧಾನಿಯಾಗುತ್ತಾರೆ. ನಿತೀಶ್ ಕುಮಾರ್ ನನಗೆ ತುಂಬಾ ಆತ್ಮಿಯರು. ಎನ್ಡಿಎ ಮತ್ತು ಜೆಡಿಯು ಮಧ್ಯವಿರುವ ಬಿರುಕು ನಿವಾರಣೆಗೆ ಪ್ರಯತ್ನಿಸುತ್ತಿದ್ದೇನೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ ಸಿನ್ಹಾ, ಜೆಡಿ ಯು ಮೋಸ ಮಾಡಿದೆ ಎನ್ನುವ ಬಿಜೆಪಿ ಆರೋಪಗಳಿಗೆ ಧ್ವನಿಗೂಡಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.