ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಆರೆಸ್ಸೆಸ್ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸರ್ಧಾರ್ ಪಟೇಲ್ ಅವರ ಭವ್ಯ ಮೂರ್ತಿಯ ನಿರ್ಮಾಣದ ಬಗ್ಗೆ ಲೇವಡಿ ಮಾಡಿದ ರಾಹುಲ್, ಆರೆಸ್ಸೆಸ್ ಸಿದ್ಧಾಂತಗಳು ವಿಷಕಾರಿಯಾಗಿವೆ ಎಂದು ವರ್ಣಿಸಿದ್ದ ಸರ್ದಾರ್ ಪಟೇಲ್ರ ಭವ್ಯ ಮೂರ್ತಿಯನ್ನು ಆರೆಸ್ಸೆಸ್ ಪ್ರತಿನಿಧಿಸುತ್ತಿರುವವರಿಂದ ನಿರ್ಮಾಣವಾಗುತ್ತಿರುವುದು ವಿಷಾದನಿಯ. ಕಾಂಗ್ರೆಸ್ ಚಿಂತನೆಗಳನ್ನು ಅಳಿಸಹಾಕಬೇಕು ಎನ್ನುವುದೇ ಮೋದಿ ಬಯಕೆಯಾಗಿದೆ ಎಂದು ಗುಡುಗಿದರು.
ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಚಾಯಿವಾಲಾ ಹೇಳಿಕೆಗೆ ಸಮಜಾಯಿಷಿ ನೀಡಲು ಪ್ರಯತ್ನಿಸಿದ ರಾಹುಲ್ ಗಾಂಧಿ, ದೇಶದ ಪ್ರತಿಯೊಬ್ಬ ಜನರು ಹಲವಾರು ರೀತಿಯ ವೃತ್ತಿಯಲ್ಲಿ ತೊಡಗಿರುತ್ತಾರೆ. ಪ್ರತಿಯೊಬ್ಬರನ್ನು ಗೌರವಿಸುವುದು ಇತರರ ಕರ್ತವ್ಯವಾಗಿದೆ ಎಂದರು.
ಸಾರ್ವಜನಿಕ ಸಭೆಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಯ ದುರಾಡಳಿತ, ರಾಜ್ಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸರ್ಧಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮಗಾಂಧಿಯವರ ಹೇಳಿಕೆಗಳ ಬಗ್ಗೆ ಮೋದಿಗೆ ಜ್ಞಾನವಿಲ್ಲ. ಅವರ ಇತಿಹಾಸವನ್ನು ತಿಳಿಯದನ್ನು ಬಿಟ್ಟು ಭವ್ಯಮೂರ್ತಿಯ ನಿರ್ಮಾಣ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.