'ತೆಲಂಗಾಣ ಆಯ್ತು, ಉತ್ತರಪ್ರದೇಶ ವಿಭಜನೆ ಯಾಕಾಗಲ್ಲ'
, ಬುಧವಾರ, 31 ಜುಲೈ 2013 (16:33 IST)
ಲಕ್ನೋ: ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನದ ಪ್ರಕಟಣೆಯಿಂದ ಉತ್ತೇಜಿತರಾದ ಬಿಎಸ್ಪಿ ಮುಖಂಡೆ ಮಾಯಾವತಿ ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸಬೇಕೆಂಬ ತಮ್ಮ ಬೇಡಿಕೆಯನ್ನು ಬುಧವಾರ ಪುನರುಚ್ಚರಿಸಿದ್ದಾರೆ. 'ತೆಲಂಗಾಣವನ್ನು ನಿರ್ಮಿಸುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ನಾವು ಸದಾ ಸಣ್ಣ ರಾಜ್ಯಗಳನ್ನು ಮತ್ತು ಆಡಳಿತ ಘಟಕಗಳನ್ನು ಪ್ರತಿಪಾದಿಸುತ್ತೇವೆ' ಎಂದು ಹೇಳಿದ್ದಾರೆ. ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸುವಂತೆ ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಬಹುಕಾಲವಾಗಿದೆ. ಕೇಂದ್ರ ಸರ್ಕಾರ ರಾಜ್ಯಗಳ ಪುನರ್ವಿಂಗಡಣೆಗೆ ನಿರ್ಧರಿಸಿ ನಾಲ್ಕು ರಾಜ್ಯಗಳನ್ನು ರಚಿಸಬೇಕು. ಅವು ಪೂರ್ವಾಂಚಲ(ಪೂರ್ವ ಉ.ಪ್ರ.) ಹರಿತ್ ಪ್ರದೇಶ್(ಪಶ್ಚಿಮ ಉ.ಪ್ರ.) ಬುಂಡೇಲ್ಖಂಡ ಮತ್ತು ಅವಾಧ್ ಪ್ರದೇಶ(ಮಧ್ಯ ಉ.ಪ್ರ.) ಎಂದು ಮಾಯಾವತಿ ಹೇಳಿದರು. ಉತ್ತರಪ್ರದೇಶದ ಎಂಪಿಗಳು ಸರ್ಕಾರದ ಮೇಲೆ ರಾಜ್ಯ ವಿಭಜನೆ ಕುರಿತು ಪ್ರಾಮಾಣಿಕ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರಬೇಕು ಎಂದು ನುಡಿದರು.