ತೆಲಂಗಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಶಿಂಧೆ
, ಗುರುವಾರ, 1 ಆಗಸ್ಟ್ 2013 (17:54 IST)
ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯದ ರಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರತಿಪಾದಿಸಿದ್ದಾರೆ. ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ತೆಲಂಗಾಣ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಶಿಂಧೆ ಹೇಳಿದರು. ತೆಲಂಗಾಣ ರಾಜ್ಯಸ್ಥಾನಮಾನ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸುವುದಿಲ್ಲ. ಆದರೆ ಮುಂದಿನ ಆರು ತಿಂಗಳಲ್ಲಿ ರಾಜ್ಯವನ್ನು ನಿರ್ಮಿಸಲಾಗುತ್ತದೆ ಎಂದು ಪ್ರತಿಪಾದಿಸಿದರು.ಇದಕ್ಕೆ ಮುಂಚೆ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ನಿರ್ಮಿಸಲಾಗುತ್ತಿತ್ತು. ಆದರೆ ರಾಜ್ಯಗಳ ನಿರ್ಮಾಣಕ್ಕೆ ಅವು ಆಧಾರವಲ್ಲ. ನಮಗೆ ಸೀಮಾಂಧ್ರ ಪ್ರತಿಭಟನೆಗಳ ಅರಿವಿದೆ. ಆದರೆ ಪಕ್ಷವು ಒಂದೊಮ್ಮೆ ನಿರ್ಧಾರ ಕೈಗೊಂಡ ಮೇಲೆ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ತೆಲಂಗಾಣದ ಬಗ್ಗೆ ನಿರ್ಧಾರ ಕೈಗೊಂಡ ಎರಡು ದಿನಗಳ ನಂತರ, ಸೀಮಾಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ತೊಂದರೆ ಅನುಭವಿಸುತ್ತಿದೆ. ಗುರುವಾರ ಸಂಜೆಯೊಳಗೆ ಬಹುತೇಕ ಸಚಿವರು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.