2 ಜಿ ತರಂಗ ಗುಚ್ಚ ಹಗರಣದ ಆರೋಪಿಯಾದ ಕನಿಮೋಳಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು, ಇಂದು ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಜೈಲಿನ ಅಧಿಕಾರಿ ಮೂಲಗಳು ತಿಳಿಸಿವೆ.
ಜೈಲಿನ ನಿಯಮಗಳು ಪೂರ್ಣಗೊಂಡ ನಂತರ ಕನಿಮೋಳಿ ಇಂದು ಸಂಜೆ 7 ಗಂಟೆಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 3 ರಂದು ಚೆನ್ನೈ ನಗರಕ್ಕೆ ಆಗಮಿಸಲಿದ್ದಾರೆ ಎಂದು ಕನಿಮೋಳಿ ಪತಿ ಅರವಿಂದನ್ ತಿಳಿಸಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರಿಯಾದ ಕನಿಮೋಳಿ, 2ಜಿ ತರಂಗ ಗುಚ್ಚ ಹಗರಣದಲ್ಲಿ ಆರೋಪಿಯಾಗಿ ಕಳೆದ ಆರು ತಿಂಗಳುಗಳಿಂದ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದರು.
43 ವರ್ಷ ವಯಸ್ಸಿನ ರಾಜ್ಯಸಭಾ ಸದಸ್ಯೆಯಾದ ಕನಿಮೋಳಿ ಮತ್ತು ಕಲೈಜ್ಞರ್ ಟಿವಿ ಚಾನೆಲ್ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್, ಸಿನಿಯುಗ್ ಫಿಲ್ಮ್ಸ್ ಕರಿಮ್ ಮೊರಾನಿ ಮತ್ತು ಕುಸೆಗಾಂವ್ ಫ್ರುಟ್ಸ್ ಆಂಡ್ ವೆಜಿಟೇಬಲ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಆಸೀಫ್ ಬಲ್ವಾ ಮತ್ತು ರಾಜೀವ್ ಬಿ.ಅಗರ್ವಾಲ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಕನಿಮೋಳಿ ಬಿಡುಗಡೆ ಕುಟುಂಬಕ್ಕೆ ತುಂಬಾ ಸಂತೋಷ ತಂದಿದೆ. ಶೀಘ್ರದಲ್ಲಿ ತಮಿಳುನಾಡಿಗೆ ತೆರಳಲಿದ್ದಾರೆ ಎಂದು ಕನಿಮೋಳಿ ಪತಿ ಅರವಿಂದನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.