ಬಿಹಾರ್ ಸರಕಾರ ಬಿಜೆಪಿ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ ಎನ್ನುವ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯವರಂತೆ ನಾವು ಗೂಡಾಚಾರ ಪ್ರವೀಣರಲ್ಲ ಎಂದು ಲೇವಡಿ ಮಾಡಿದ್ದಾರೆ.
ಫೋನ್ ಕದ್ದಾಲಿಕೆ, ಅಥವಾ ಕುಟುಕು ಕಾರ್ಯಾತರಣೆ ಅಥವಾ ಗೂಢಾಚಾರಿಕೆಯಲ್ಲಿ ನಾವು ತಜ್ಞರಲ್ಲ. ಬಿಜೆಪಿ ನಾಯಕರು ಇಂತಹ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಮಹಿಳೆಯ ಬಗ್ಗೆ ಗೂಢಾಚಾರಿಕೆ ನಡೆಸುವಂತೆ ನರೇಂದ್ರ ಮೋದಿ ಬೆಂಬಲಿಗ ಅಮಿತ್ ಶಾ ಹಿರಿಯ ಪೊಲೀಸರಿಗೆ ಅನಧಿಕೃತವಾಗಿ ಆದೇಶ ನೀಡಿದ್ದರು ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದರೆ, ವಿಪಕ್ಷಗಳಿಗೆ ಟೀಕಿಸಲು ಮತ್ತೊಂದು ಅಸ್ತ್ರ ದೊರೆತಂತಾಗಿದೆ.
ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮದು ಸೇರಿದಂತೆ ಇತರ ಬಿಜೆಪಿ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ನಿನ್ನೆ ಆರೋಪಿಸಿದ್ದರು.