ಕೇರಳದ ರಾಜ್ಯಪಾಲೆಯಾದ ಶೀಲಾ ದೀಕ್ಷಿತ್
ನವದೆಹಲಿ , ಬುಧವಾರ, 5 ಮಾರ್ಚ್ 2014 (19:03 IST)
ಚುನಾವಣೆಯಲ್ಲಿ ಸೋತವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿಸುವ ಚಾಳಿ ಮುಂದುವರೆಸಿರುವ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿದ್ದ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಕೇರಳದ ನೂತನ ರಾಜ್ಯಪಾಲೆಯಾಗಿ ನೇಮಿಸಿದೆ. ಶೀಲಾದೀಕ್ಷಿತ್ 1998 ರಿಂದ 2013ರವರೆಗೆ ಸತತ ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯ ಗಾದಿಯನ್ನೇರಿದ್ದರು. ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕ್ರೇಜಿವಾಲ್ ಎದುರು ತಮ್ಮ ಚರಿಷ್ಮಾ ತೋರಿಸಲು ಅವರು ವಿಫಲರಾಗಿದ್ದರು.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದೆಹಲಿಯ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 8 ಸೀಟುಗಳನ್ನು ಗೆದ್ದಿತ್ತು.ಕೇರಳದ ಹಾಲಿ ರಾಜ್ಯಪಾಲರಾದ ನಿಖಿಲ್ ಕುಮಾರ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು ಆ ಸ್ಥಾನಕ್ಕೆ ಶೀಲಾ ದೀಕ್ಷಿತ್ರನ್ನು ತಂದು ಕೂರಿಸಲಾಗಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಅವರು ಬಿಹಾರದ ಔರಂಗಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ .