ಭಾನುವಾರ ವಿವಾದಿತ ಕುಡಂಕುಳಂ ಪರಮಾಣು ಸ್ಥಾವರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿರುವ ಭಾರತ ಮಾಜಿ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಈ ಸ್ಥಾವರವು ಅತಿ ಸುರಕ್ಷಿತವಾಗಿದ್ದು, ಇದರಿಂದ ಜನರಿಗೆ ಪ್ರಯೋಜನವಾಗಲಿದೆ ಎಂದು ನುಡಿದಿದ್ದಾರೆ.
ಭಾರತ-ರಷ್ಯಾ ಜಂಟಿ ಅಣು ವಿದ್ಯುತ್ ಯೋಜನೆಯಾದ ತಮಿಳುನಾಡಿನ ಕುಡಂಕುಳಂ ಅಣುಸ್ಥಾವರ ನಿರ್ಮಾಣಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿ ಕೈಗೊಂಡ ಪ್ರತಿಭಟನೆಯಲ್ಲಿ ಅನೇಕ ಬಾರಿ ಹಿಂಸಾಚಾರವು ನಡೆದಿತ್ತು.
ಆದರೆ ಭಾನುವಾರ ಪರಮಾಣು ಸ್ಥಾವರದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿರುವ ಕಲಾಂ, ಸ್ಥಾವರವು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿದೆ ಎಂದು ಸರ್ಟಿಫಿಕೇಟ್ ನೀಡಿದ್ದಾರೆ.
ಸ್ಥಾವರನ್ನು ಸರಿಯಾದ ಎತ್ತರದಲ್ಲಿ ನಿರ್ಮಿಸಲಾಗುತ್ತಿದ್ದು, ಕಡಿಮೆ ಭೂಕಂಪ ಸಾಧ್ಯತಾ ವಲಯದಲ್ಲಿರುವುದರಿಂದ ಯಾವುದೇ ಸುನಾವಿ ಭೀತಿ ಕಾಡದು ಎಂದಿದ್ದಾರೆ. ಇಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆಯೂ ಕಲಾಂ ಸಂತಸ ವ್ಯಕ್ತಪಡಿಸಿದ್ದು, ಪರಿಸರಕ್ಕೆ ಯಾವುದೇ ತೊಂದರಿಯಿಲ್ಲ ಎಂದಿದ್ದಾರೆ.
ಅಣುಸ್ಥಾವರ ವಿಜ್ಞಾನಿ ಹಾಗೂ ಎಂಜನಿಯರ್ಗಳ ಜತೆ ಚರ್ಚೆ ನಡೆಸಿದ ನಂತರ ಮಾತನಾಡಿದ ಕಲಾಂ, ಒಬ್ಬ ವಿಜ್ಞಾನಿಯಾಗಿ ನಾನಿಲ್ಲಿ ಭೇಟಿ ನೀಡಿದ್ದು ಸ್ಥಾವರದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.