2 ಜಿ ತರಂಗ ಗುಚ್ಚ ಹಗರಣದಲ್ಲಿ ಆರೋಪಿಯಾದ ಡಿಎಂಕೆ ಸಂಸದೆ ಪುತ್ರಿ ಕನಿಮೋಳಿಗೆ ಜಾಮೀನು ದೊರೆತಿರುವುದು ತುಂಬಾ ಸಂತೋಷ ತಂದಿದೆ. ಕನಿಮೋಳಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.
ದೆಹಲಿ ಹೈಕೋರ್ಟ್ ಮಧ್ಯಾಹ್ನ ಜಾಮೀನು ನೀಡಿದ ನಂತರ ಕನಿಮೋಳಿ ಮತ್ತು ನಾನು ಸಂತೋಷ ಹಂಚಿಕೊಂಡಿದ್ದೇವೆ. ಕನಿಮೋಳಿಗೆ ಜಾಮೀನು ದೊರೆತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಕನಿಮೋಳಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಲಾಗುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕರುಣಾನಿಧಿ, ನಾನು ಸರ್ವಾಧಿಕಾರಿಯಲ್ಲ. ಕನಿಮೋಳಿಗೆ ಯಾವ ಹುದ್ದೆ ನೀಡಬೇಕು ಎನ್ನುವುದು ಪಕ್ಷದ ಉನ್ನತ ಸಮಿತಿ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದೆ ಕನಿಮೋಳಿಯವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದು ಅವರ ಕುಟುಂಬಕ್ಕೆ ಸಂತಸ ತಂದಿದೆ. ಕನಿಮೋಳಿ ಜಾಮೀನು ಆದೇಶದ ಪ್ರತಿಗಳು ಲಭ್ಯವಾದ ನಂತರ ನ್ಯಾಯಾಲಯ ಯಾವ ಷರತ್ತುಗಳನ್ನು ವಿಧಿಸಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ.
ಹಾಲಿನ ದರ ಮತ್ತು ಸರಕು ಸಾಗಾಣೆಗಳ ದರವನ್ನು ಹೆಚ್ಚಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಎಐಎಡಿಎಂಕೆ ಸರಕಾರದ ವಿರುದ್ಧ ಹೋರಾಡಲು ಕನಿಮೋಳಿ ಜಾಮೀನು ಆದೇಶ ನೈತಿಕ ಬಲವನ್ನು ತಂದಿದೆ ಎಂದು ಡಿಎಂಕೆ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.