ಐದು ರಾಜ್ಯಗಳ ಚುನಾವಣೆ ನಂತ್ರ ಬಜೆಟ್ ಮಂಡನೆ: ಪ್ರಣಬ್
ನವದೆಹಲಿ , ಸೋಮವಾರ, 2 ಜನವರಿ 2012 (15:14 IST)
ಪ್ರಸಕ್ತ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗಳ ನಂತರ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ.ಆದರೆ ಬಜೆಟ್ ಮಂಡನೆ ದಿನಾಂಕದ ಘೋಷಣೆ ಬಗ್ಗೆ ಕೇಂದ್ರ ಸರಕಾರ ನಿರ್ಧರಿಸಿಲ್ಲ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಯಾವತ್ತು ಬಜೆಟ್ ಮಂಡಿಸಬೇಕು ಎನ್ನುವ ಬಗ್ಗೆ ನಾವು ಇಲ್ಲಿಯವರೆಗೆ ನಿರ್ಧರಿಸಿಲ್ಲ. ಆದರೆ, ಸಹಜವಾಗಿ ಚುನಾವಣೆಗಳ ನಂತರ ಮಂಡಿಸುವ ಸಾಧ್ಯತೆಗಳಿವೆ ಎಂದು ಸಚಿವ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಮುಂದಿನ ವರ್ಷದ ಜನೆವರಿ 30 ರಿಂದ ಮಾರ್ಚ್ 3 ರವರೆಗೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ, ಕೇಂದ್ರ ಸರಕಾರದ ಬಜೆಟ್ ಮಂಡನೆಯ ದಿನಾಂಕದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವ ಮುಖರ್ಜಿ ಉತ್ತರಿಸುತ್ತಿದ್ದರು.ಚುನಾವಣಾ ಆಯೋಗದ ಘೋಷಣೆಯ ಪ್ರಕಾರ, ಕೊನೆಯ ಹಂತದ ಮತದಾನ ಮಾರ್ಚ್ 3 ರಂದು ಗೋವಾದಲ್ಲಿ ನಡೆಯಲಿದೆ. ಮಾರ್ಚ್ 4 ರಂದು ಮತ ಏಣಿಕೆ ಕಾರ್ಯ ಆರಂಭವಾಗಲಿದೆ.ಆದರೆ, ಪ್ರತಿವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಕೇಂದ್ರ ಸರಕಾರ ಬಜೆಟ್ ಮಂಡಿಸುತ್ತಿತ್ತು.