ಉತ್ತರಪ್ರದೇಶದಲ್ಲಿ ಅಶೋಕ್ ಸಿಂಗಾಲ್ ಬಿಡುಗಡೆ
ಲಕ್ನೋ , ಮಂಗಳವಾರ, 27 ಆಗಸ್ಟ್ 2013 (08:17 IST)
ಸಮಾಜವಾದಿ ಪಕ್ಷದ ಸರ್ಕಾರ ಉತ್ತರಪ್ರದೇಶದಲ್ಲಿ ಸೋಮವಾರ ಸಂಜೆ ವಿಶ್ವ ಹಿಂದು ಪರಿಷದ್ನ 958 ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದು ಅವರಲ್ಲಿ ಅಶೋಕ್ ಸಿಂಘಾಲ್ ಮತ್ತು ಜಗದ್ಗುರು ರಾಮಭದ್ರಾಚಾರ್ಯ ಕೂಡ ಸೇರಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು 2454 ವಿಎಚ್ಪಿ ನಾಯಕರನ್ನು ಬಂಧಿಸಲಾಗಿತ್ತು. ವಿಎಚ್ಪಿ 84-ಕೋಸಿ ಯಾತ್ರೆಯ ನಿಷೇಧವನ್ನು ಉಲ್ಲಂಘಿಸಿ ಶಾಂತಿ ಕದಡಿದ್ದರಿಂದ ಈ ಬಂಧನವನ್ನು ಮಾಡಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠ ವಿಎಚ್ಪಿ ಮುಖಂಡರಾದ ಸಿಂಘಾಲ್, ರಾಮಭದ್ರಾಚಾರ್ಯ ಮತ್ತು ಪ್ರವೀಣ್ ತೊಗಾಡಿಯಾ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಈ ಮೂವರ ಅಕ್ರಮ ಬಂಧನದ ಬಗ್ಗೆ ಉತ್ತರಿಸುವಂತೆ ಕೂಡ ಕೋರ್ಟ್ ರಾಜ್ಯಸರ್ಕಾರಕ್ಕೆ ಸೂಚಿಸಿತು.ವಕೀಲರಾದ ರಂಜನ ಅಗ್ನಿಹೋತ್ರಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸಿಂಘಾಲ್ ಮತ್ತು ರಾಮಭದ್ರಾಚಾರ್ಯ ಅವರನ್ನು ಬಿಡುಗಡೆ ಮಾಡಿದ್ದರೂ ತೊಗಾಡಿಯಾ ಅವರನ್ನು ಫೈಜಾಬಾದ್ನಿಂದ ಎಟಾಗೆ ಸ್ಥಳಾಂತರಿಸಲಾಗಿದೆ. ತೊಗಾಡಿಯಾ ಅವರಿಂದ ಶಾಂತಿಗೆ ಯಾವುದೇ ಗಂಡಾಂತರ ಉಂಟಾಗುವುದಿಲ್ಲವೆಂದು ದೃಢಪಟ್ಟ ಬಳಿಕ ಬಿಡುಗಡೆ ಮಾಡುವುದಾಗಿ ಗೃಹಕಾರ್ಯದರ್ಶಿ ಸರ್ವೇಶ್ ತಿಳಿಸಿದ್ದಾರೆ.