ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೇಲೆ ಚಪ್ಪಲಿ ಎಸೆದ ಯುವಕನ ಬಂಧನ
ಕವಿನಗರ , ಸೋಮವಾರ, 31 ಮಾರ್ಚ್ 2014 (15:57 IST)
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ರ ಮೇಲೆ ಚಪ್ಪಲಿ ಎಸೆದ ಕಾರಣಕ್ಕೆ ಕವಿನಗರ ಠಾಣಾ ವ್ಯಾಪ್ತಿಯ ಪೋಲಿಸರು 25 ವರ್ಷ ವಯಸ್ಸಿನ ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಕವಿನಗರದ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಘಟನೆ ವರದಿಯಾಗಿದೆ. ಯಾದವ್ ತನ್ನ ಭಾಷಣವನ್ನು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲಿ ಪ್ರೇಕ್ಷಕರ ಗುಂಪಿನಿಂದ ಎದ್ದು ನಿಂತ ಯುವಕ ತಾನು ಧರಿಸಿದ್ದ ಚಪ್ಪಲಿಯನ್ನು ಮುಖ್ಯಮಂತ್ರಿ ಎಡೆಗೆ ಬೀಸಾಡಿ, ತನ್ನ ಭೂಮಿಯ ಅಕ್ರಮ ಆಕ್ರಮಣದ ಬಗ್ಗೆ ಪ್ರತಿಭಟಿಸಿದ್ದಾನೆ.ಆತನೆಸೆದ ಚಪ್ಪಲಿ ಮಾಧ್ಯಮದವರಿಗೆ ಮೀಸಲಾಗಿಟ್ಟಿದ್ದ ಗ್ಯಾಲರಿಯಲ್ಲಿ ಬಿದ್ದಿತು. ತಕ್ಷಣ ಸ್ಥಳಕ್ಕಾಗಮಿಸಿದ ಪೋಲಿಸ್ ಅಧಿಕಾರಿಗಳು ಯುವಕನನ್ನು ಸೆರೆ ಹಿಡಿದು ಠಾಣೆಗೆ ಕರೆದೊಯ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆಯನ್ನು ಕೈಗೆತ್ತಿ ಕೊಂಡಿದ್ದಾರೆ.