ಡಿಎಂಕೆ ಪಕ್ಷದ ಮುಖಂಡ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಪುತ್ರ ಸ್ಟಾಲಿನ್ಗೆ ಪರೋಕ್ಷ ಜೀವ ಬೆದರಿಕೆ ಒಡ್ಡಿದ್ದ ಡಿಎಂಕೆ ಅಮಾನತುಗೊಂಡ ಮುಖಂಡ ಅಳಗಿರಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.
3 ತಿಂಗಳಲ್ಲಿ ಸ್ಟಾಲಿನ್ ಸಾಯಲಿದ್ದಾರೆ ಎಂಬ ಅಳಗಿರಿ ನೀಡಿದ್ದ ಹೇಳಿಕೆಯನ್ನು ಇಂದು ಬೆಳಗ್ಗೆ ಡಿಎಂಕೆ ಪಕ್ಷದ ಮುಖಂಡ ಎಂ ಕರುಣಾನಿಧಿ ಅವರು ಬಹಿರಂಗಪಡಿಸುತ್ತಿದ್ದಂತೆಯೇ ಚೆನ್ನೈನ ಹಲವೆಡೆ ಸ್ಟಾಲಿನ್ ಬೆಂಬಲಿಗರು ಅಳಗಿರಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಚೆನ್ನೈನ ವಿವಿಧೆಡೆ ಡಿಎಂಕೆ ಕಾರ್ಯಕರ್ತರು ಮತ್ತು ಸ್ಟಾಲಿನ್ ಬೆಂಬಲಿಗರು ರಸ್ತೆ ತಡೆ ನಡೆಸಿ, ಅಳಗಿರಿ ಭಾವಚಿತ್ರಗಳನ್ನು ಹರಿದು ಹಾಕುತ್ತಿದ್ದಾರೆ. ಅಲ್ಲದೆ ಅವರ ಪೋಸ್ಟರ್ಗಳಿಗೆ ಬೆಂಕಿ ಹಾಕಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಚೆನ್ನೈನ ಪ್ರಮುಖ ಪ್ರದೇಶಗಳಾದ ಸೈದಾಪೇಟೆ, ಪುಳಲ್, ಪೇಲಂಪೇಟೆ ಮತ್ತು ವಳ್ಳುವರ್ ಕೋತಂನಲ್ಲಿ ಸ್ಟಾಲಿನ್ ಬೆಂಬಲಿಗರು ರಸ್ತೆ ತಡೆ ನಡೆಸಿ ಅಳಗಿರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಎಂಕೆ ಕಾರ್ಯಕರ್ತರ ಈ ದಿಢೀರ್ ಪ್ರತಿಭಟನೆಯಿಂದಾಗಿ ಚೆನ್ನೈನಲ್ಲಿ ಪ್ರಕ್ಷುಬ್ಧ ವಾತಾವರಣೆ ನಿರ್ಮಾಣಗೊಂಡಿದೆ. ಅಲ್ಲದೆ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಚೆನ್ನೈನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕರುಣಾನಿಧಿ, ಅಳಗಿರಿ ಅವರನ್ನು ಅಮಾನತು ಮಾಡುವ ನಿರ್ಧಾರ ನನ್ನ ವೈಯುಕ್ತಿಕ ನಿರ್ಧಾರವಲ್ಲ. ಇದು ಡಿಎಂಕೆ ಪಕ್ಷ ತೆಗೆದುಕೊಂಡ ನಿರ್ಧಾರ. ಅಳಗಿರಿ ಅವರ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಹೀಗಾಗಿಯೇ ಅವರನ್ನು ಅಮಾನತು ಮಾಡಲಾಗಿದೆ ಎಂದು ಕರುಣಾನಿಧಿ ಹೇಳಿದ್ದರು.
ಡಿಎಂಕೆ ಪಕ್ಷದ ಮುಖಂಡ ಸ್ಟಾಲಿನ್ ಅವರು ಕೆಲವೇ ತಿಂಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಹೇಳಿರುವ ಅಳಗಿರಿ ವಿರುದ್ಧ ಕರುಣಾನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾಲಿನ್ ವಿರುದ್ಧ ಅಳಗಿರಿ ಇಂತಹ ಹೇಳಿಕೆ ನೀಡಿದ್ದಾರೆ. ಇದನ್ನು ಡಿಎಂಕೆ ಪಕ್ಷದ ಮುಖಂಡನಾಗಿ ಹೇಗೆ ಸಹಿಸಲು ಸಾಧ್ಯ ಎಂದಿದ್ದರು.