Select Your Language

Notifications

webdunia
webdunia
webdunia
webdunia

ಚಂದ್ರಯಾನ ವೈಫಲ್ಯಕ್ಕೆ ಅಧಿಕ ಉಷ್ಣಾಂಶ ಕಾರಣವೇ?

ಚಂದ್ರಯಾನ ವೈಫಲ್ಯಕ್ಕೆ ಅಧಿಕ ಉಷ್ಣಾಂಶ ಕಾರಣವೇ?
ಪಣಜಿ , ಸೋಮವಾರ, 7 ಸೆಪ್ಟಂಬರ್ 2009 (12:36 IST)
ಭಾರತದ ಮೊತ್ತ ಮೊದಲ ಚಂದ್ರಯಾನ ಗಗನನೌಕೆಯ ಅಕಾಲ ಮೃತ್ಯುವಿಗೆ ಅಧಿಕ ಉಷ್ಣಾಂಶ ಕಾರಣವೇ? ಹೌದೆನ್ನುತ್ತಾರೆ ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕರು. ಅವರ ಪ್ರಕಾರ ಕಕ್ಷೆಯನ್ನು ಮೇಲಕ್ಕೇರಿಸಿದ ಕಾರಣ ಅಧಿಕ ಉಷ್ಣಾಂಶ. ಆದರೆ ಅಷ್ಟರಲ್ಲಾಗಲೇ ನೌಕೆಗೆ ಹಾನಿಯಾಗಿತ್ತು ಎನ್ನುವುದು ಅವರ ಅಭಿಪ್ರಾಯ.

ಈ ವರ್ಷದ ಮೇ ತಿಂಗಳಲ್ಲಿ ಚಂದ್ರನ ಮೇಲ್ಮೈಗಿಂತ 100 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿದ್ದ ಗಗನನೌಕೆಯನ್ನು 200 ಕಿ.ಮೀ. ಎತ್ತರಕ್ಕೆ ಏರಿಸಲಾಗಿತ್ತು. ಚಂದ್ರನಲ್ಲಿನ ಕಕ್ಷೆ ಚಲನವಲನ, ಗುರುತ್ವಾಕರ್ಷಣೆ ಕುರಿತ ಹೆಚ್ಚಿನ ಅಧ್ಯಯನಕ್ಕೆ ಪೂರಕವಾಗುವಂತೆ ಮತ್ತು ಅತ್ಯುತ್ತಮ ವೀಕ್ಷಣೆಯು ಲಭ್ಯವಾಗಬೇಕೆಂದು ವಿಜ್ಞಾನಿಗಳು ಹೀಗೆ ಮಾಡಿದ್ದರು.

ಆದರೆ ಬೆಂಗಳೂರು ಇಸ್ರೋ ಸ್ಯಾಟಲೈಟ್ ಕೇಂದ್ರದ ನಿರ್ದೇಶಕ ಡಾ. ಟಿ.ಕೆ. ಅಲೆಕ್ಸ್ ಪ್ರಕಾರ ಮೇಲ್ಮೈಯಲ್ಲಿನ 75 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ತಪ್ಪಿಸುವ ಸಲುವಾಗಿ ಕಕ್ಷೆಯನ್ನು ಮೇಲಕ್ಕೇರಿಸಲಾಗಿತ್ತು. ಇದೇ ಕಾರಣದಿಂದಾಗಿ ಜುಲೈ ತಿಂಗಳಲ್ಲಿ ನೌಕೆಯ ಎರಡು ಪ್ರಮುಖ ಸೆನ್ಸಾರ್‌ಗಳು ವಿಫಲವಾಗಿದ್ದವು. ಚಂದ್ರಯಾನದ ಪ್ರಮುಖ ಭಾಗವೇ ಈ ಸೆನ್ಸಾರ್‌ಗಳಾಗಿದ್ದು, ವಿಜ್ಞಾನಿಗಳು ಇದರ ಮೂಲಕವೇ ತಮ್ಮ ಕಾರ್ಯ ಸಾಧನೆಗಳನ್ನು ಮಾಡಿಕೊಳ್ಳಬೇಕಿತ್ತು. ಅವುಗಳ ಮೂಲಕ ತಮ್ಮ ಗುರಿಯನ್ನು ಸಾಧಿಸಬೇಕಿತ್ತು ಎಂದಿದ್ದಾರೆ.

ಉಷ್ಣಾಂಶ ವಿಚಾರವು ಇಸ್ರೋಗೆ ನವೆಂಬರ್‌ನಲ್ಲೇ ಗಮನಕ್ಕೆ ಬಂದಿತ್ತು. ಇದೇ ಕಾರಣದಿಂದಾಗಿ ನೌಕೆಯ ಕೆಲವು ಭಾಗಗಳನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಯಿತು. ಅಲ್ಲದೆ ಆಗಸ್ಟ್ 25ರಂದು ಅಧಿಕೃತ ಘೋಷಣೆಯಾಗುವ ಮೊದಲೇ ನೌಕೆಯ ವೈಫಲ್ಯಕ್ಕೆ ಗುರಿಯಾಗಬಹುದೆಂದೂ ವಿಜ್ಞಾನಿಗಳು ನಿರೀಕ್ಷಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಯಾನವು ಅವಧಿಗಿಂತ ಮೊದಲೇ ಅಂತ್ಯವನ್ನು ಕಂಡ ಹೊರತಾಗಿಯೂ ಶೇ.95ರಷ್ಟು ಫಲಿತಾಂಶವನ್ನು ನೀಡಿದೆ. ಅದು ಜುಲೈ 22ರ ಖಗ್ರಾಸ ಚಂದ್ರಗ್ರಹಣ ಸೇರಿದಂತೆ ಚಂದ್ರನ ಅಪಾರ ಅದ್ಭುತ ಚಿತ್ರಗಳನ್ನು ನಮಗೆ ಕಳುಹಿಸಿಕೊಟ್ಟಿದೆ ವಿಜ್ಞಾನಿಗಳು ಹೇಳಿದ್ದಾರೆ.

ಇಂದು ಪರಿಶೀಲನೆ..
ಭಾರತದ ಪ್ರಪ್ರಥಮ ಚಂದ್ರಯಾನದ ನಿರ್ವಹಣೆ ಕುರಿತು ಭಾರತೀಯ ವಿಜ್ಞಾನಿಗಳೊಂದಿಗೆ ಯೂರೋಪಿಯನ್ ಮತ್ತು ಅಮೆರಿಕನ್ ಬಾಹ್ಯಾಕಾಶ ವಿಜ್ಞಾನಿಗಳು ಸೋಮವಾರ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ), ನಾಸಾ ಮತ್ತು ಬಲ್ಗೇರಿಯನ್ ಅಕಾಡೆಮಿಯ ವಿಜ್ಞಾನಿಗಳು ಭಾರತೀಯ ಚಂದ್ರಯಾನದ ಅವಲೋಕನ ನಡೆಸಲಿದ್ದಾರೆ ಎಂದು ಇಸ್ರೋ ನಿರ್ದೇಶಕ ಎಸ್. ಸತೀಶ್ ತಿಳಿಸಿದ್ದಾರೆ.

Share this Story:

Follow Webdunia kannada