ಕ್ಷಮಾಪಣೆ ಕೇಳಿ, ಇಲ್ಲದಿದ್ರೆ ಮಾನನಷ್ಟ ದಾವೆ ಹೂಡ್ತೇವೆ: ಕೇಜ್ರಿವಾಲ್ಗೆ ಬೆದರಿಕೆ
ನವದೆಹಲಿ , ಶುಕ್ರವಾರ, 31 ಜನವರಿ 2014 (20:07 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ಹೆಸರಿಸಿರುವ ಕೇಂದ್ರ ಸಚಿವ ಜಿ.ಕೆ.ವಾಸನ್ ಮತ್ತು ಬಿಜೆಪಿ ಪ್ರತಿಪಕ್ಷದ ನಿತಿನ್ ಗಡ್ಕರಿ ವ್ಯಗ್ರರಾಗಿದ್ದಾರೆ. ಕೇಜ್ರಿವಾಲರೇ ಕ್ಷಮಾಪಣೆ ಕೇಳಿ, ಇಲ್ಲದಿದ್ರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಕಾನೂನಿನ ಬೆದರಿಕೆಗೆ ಕೇಜ್ರಿವಾಲ್ ಬಗ್ಗುವಂತೆ ಕಾಣುತ್ತಿಲ್ಲ. ಆಪ್ ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ 24 ಭ್ರಷ್ಟ ಮುಖಂಡರ ವಿರುದ್ಧ ಕೇಜ್ರಿವಾಲ್ ದೋಷಾರೋಪ ಹೊರಿಸಿದ್ದರು. ಕೇಜ್ರಿವಾಲ್ ತಮ್ಮ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರನ್ನು ಹೆಸರಿಸಿದ್ದು, ನರೇಂದ್ರ ಮೋದಿ ಹೆಸರನ್ನು ಕೈಬಿಟ್ಟಿದ್ದಾರೆ. ಆದರೂ ಅವರಿಬ್ಬರೂ ರಾಷ್ಟ್ರೀಯ ಚುನಾವಣೆ ಪ್ರಚಾರಗಳಿಗೆ ಅಂದಾಜು 500 ಕೋಟಿ ಖರ್ಚು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. 2012ರಲ್ಲಿ ಕೇಜ್ರಿವಾಲ್ ಮತ್ತು ಎಎಪಿ ಕಾರ್ಯಕರ್ತರು ಗಡ್ಕರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಗರಣ ಉಲ್ಭಣಿಸಿ, ಗಡ್ಕರಿ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಮತ್ತು ಉತ್ತರದಾಯಿತ್ವಕ್ಕೆ ಗಮನವಹಿಸುವ ಪಕ್ಷದ ಬದ್ಧತೆ ನಗರ ಮಧ್ಯಮ ವರ್ಗವನ್ನು ಸೆಳೆದಿದ್ದು, ಆಮ್ ಆದ್ಮಿ ದೇಶದ ಇತರ ಭಾಗಗಳಲ್ಲೂ ಗಮನಸೆಳೆದಿದೆ.