ಕಾಂಗ್ರೆಸ್ನಿಂದ ನನ್ನ ಹತ್ಯೆಗೆ ಸಂಚು: ಮೋದಿ ಗಂಭೀರ ಆರೋಪ
ಅಹ್ಮದಾಬಾದ್ , ಶುಕ್ರವಾರ, 14 ಮಾರ್ಚ್ 2014 (14:32 IST)
ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ತನ್ನ ಹತ್ಯೆಗೆ ಅಥವಾ ಥಳಿಸುವುದಕ್ಕೆ ಅವಕಾಶಗಳಿಗಾಗಿ ಕಾಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಟೀ ಮಾರಾಟಗಾರ ಸವಾಲು ಹಾಕಿ ದೊಡ್ಡ ರಾಜಕೀಯ ಸಾಮಾಜ್ರ್ಯವನ್ನು ಪ್ರಶ್ನಿಸಿರುವುದು ಕಾಂಗ್ರೆಸ್ಗೆ ಪಥ್ಯವಾಗಿಲ್ಲ. ಆದ್ದರಿಂದ ನನ್ನ ಹತ್ಯೆಗೆ ಅವಕಾಶಕ್ಕಾಗಿ ಕಾಯುತ್ತಿದೆ ಎಂದು ಅಹ್ಮದಾಬಾದ್ನಲ್ಲಿ ಬೃಹತ್ ಯುವ ರ್ಯಾಲಿಯಲ್ಲಿ ಮೋದಿ ಟೀಕಾಪ್ರಹಾರ ಮಾಡಿದರು. ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಿಸಬಹುದು.ಆದರೆ ದೇಶಸೇವೆಯಿಂದ ನನ್ನನ್ನು ತಡೆಯಲು ಅವರಿಗೆ ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.ಭಾವನಾತ್ಮಕ ದನಿಯಲ್ಲಿ ಮಾತನಾಡಿದ ಅವರು ತಾನು ಯಾವುದೇ ಹುದ್ದೆ ಅಥವಾ ಖ್ಯಾತಿಗಾಗಿ ಮನೆಯನ್ನು ಬಿಟ್ಟಿಲ್ಲ ಎಂದು ಹೇಳಿದರು.ದೇಶದ ಯುವಜನತೆಗಾಗಿ ಯುಪಿಎ ಸರ್ಕಾರದ ನೀತಿ ಬಗ್ಗೆ ಟೀಕಿಸಿದ ಅವರು, ಯುವಕರ ಬಗ್ಗೆ ಯೋಚಿಸುವುದು, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು, ಉದ್ಯೋಗಾವಕಾಶ ಒದಗಿಸುವ ಮೂಲಕ ಯುವಕರನ್ನು ಬಳಸಿಕೊಳ್ಳುವುದು ಅಧಿಕಾರದಲ್ಲಿರುವ ಪಕ್ಷದ ಜವಾಬ್ದಾರಿ ಎಂದು ಹೇಳಿದರು.ಕಳೆದ ವರ್ಷದ ಬಜೆಟ್ನಲ್ಲಿ 10 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದಾಗಿ ಹೇಳಿ 1000 ಕೋಟಿ ಮೀಸಲಿರಿಸಿತ್ತು. ವಾಸ್ತವವಾಗಿ ಕಳೆದ ವರ್ಷ 18, 352 ಯುವಕರಿಗೆ ಮಾತ್ರ ತರಬೇತಿ ನೀಡಿದ್ದಾರೆ ಎಂದು ಮೋದಿ ಆರೋಪಿಸಿದರು.ಇದು ಶೇ. 5ರಷ್ಟಾಗುತ್ತದೆ. ಈ ಪ್ರಮಾಣದಲ್ಲಿ ಕಾಂಗ್ರೆಸ್ ಸರ್ಕಾರ ಗುರಿ ಮುಟ್ಟಲು 20 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೋದಿ ವ್ಯಂಗ್ಯವಾಡಿದರು.