ಜೂ.27ರಂದು ತಮಿಳುನಾಡಿನ ರಾಜ್ಯಸಭಾ ಸ್ಥಾನಕ್ಕೆ ನಡೆಯಲಿರುವ ದ್ವೆ„ವಾರ್ಷಿಕ ಚುನಾವಣೆಯಲ್ಲಿ ಕನಿಮೊಳಿ ಆಯ್ಕೆಗೆ ಡಿಎಂಕೆ ಉದ್ದೇಶಿಸಿದ್ದು, ಬೆಂಬಲ ನೀಡುವಂತೆ ಕಾಂಗ್ರೆಸ್ ಬಾಗಿಲು ತಟ್ಟಿದೆ.
ಈ ಸಂಬಂಧ ಹಿರಿಯ ಡಿಎಂಕೆ ಮುಖಂಡ ಟಿ.ಆರ್.ಬಾಲು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿಯಾಗಿ ಬೆಂಬಲಿಸುವಂತೆ ಮನವಿ ಮಾಡಿದರು.
ಆದರೆ ಕನಿಮೊಳಿಯವರನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಡಿಎಂಕೆ-ಕಾಂಗ್ರೆಸ್ ಭೇಟಿ ಮುನ್ನ ನಟ ವಿಜಯಕಾಂತ್ ಅವರು ಡಿಎಂಡಿಕೆ ಪಕ್ಷದ ಶಾಸಕರು, ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ನ್ನು ಕೇಳಿದ್ದರು.
ಈ ಮಧ್ಯೆ ಕನಿಮೊಳಿಯವರಿಗೆ ಬೆಂಬಲ ನೀಡುವುದಾಗಿ ಎಂಎಂಕೆಯ ಇಬ್ಬರು ಶಾಸಕರು ಘೋಷಿಸಿದ್ದಾರೆ.
ತಮಿಳುನಾಡು ರಾಜ್ಯಸಭೆಯ ಒಟ್ಟು 6 ಸ್ಥಾನಗಳಲ್ಲಿ 4 ಸ್ಥಾನಕ್ಕೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಭ್ಯರ್ಥಿಗಳನ್ನು ನಿಲ್ಲಿಸಲು ಉದ್ದೇಶಿಸಿದ್ದು, ಒಂದು ಸ್ಥಾನಕ್ಕೆ ಸಿಪಿಐನ ಡಿ.ರಾಜ ಅವರನ್ನು ಬೆಂಬಲಿಸಲು ಉದ್ದೇಶಿಸಿದೆ. 6ನೇ ಸ್ಥಾನಕ್ಕೆ ಡಿಎಂಡಿಕೆ ಮತ್ತು ಡಿಎಂಕೆ ತಮ್ಮ ಅಭ್ಯರ್ಥಿಗಳನ್ನು ಹೆಸರಿಸಿದ್ದು ಕಾಂಗ್ರೆಸ್ ಬೆಂಬಲದ ಮೇಲೆ ಭವಿಷ್ಯ ನಿಂತಿದೆ.