ಇಲಿಯನ್ನು ಮರೆತುಬಿಡಿ, ಲೋಕಪಾಲ್ ಮಸೂದೆ ಸಿಂಹವನ್ನು ಜೈಲಿಗೆ ತಳ್ಳುವಷ್ಟು ಸಶಕ್ತವಾಗಿದೆ: ಹಜಾರೆ
ರಾಲೇಗಣ್ ಸಿದ್ದಿ , ಮಂಗಳವಾರ, 17 ಡಿಸೆಂಬರ್ 2013 (17:28 IST)
ಯುಪಿಎ ಸರಕಾರ ಲೋಕಸಭೆಯಲ್ಲಿ ಮಂಡಿಸುತ್ತಿರುವ ದುರ್ಬಲ ಲೋಕಪಾಲ್ ಮಸೂದೆಯಿಂದ ಇಲಿಯನ್ನು ಕೂಡಾ ಜೈಲಿಗೆ ಹಾಕಲು ಸಾಧ್ಯವಿಲ್ಲ ಎನ್ನುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ತಿರುಗೇಟು ನೀಡಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಪ್ರಸ್ತುತ ಮಸೂದೆಯಿಂದ ಸಿಂಹವನ್ನು ಕೂಡಾ ಜೈಲಿಗೆ ತಳ್ಳಬಹುದಾಗಿದೆ ಎಂದು ಹೇಳಿದ್ದಾರೆ. ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಹಜಾರೆ ನಡೆಸುತ್ತಿರುವ ನಿರಶನ ಏಳನೇ ದಿನಕ್ಕೆ ಕಾಲಿರಿಸಿದೆ. ನೀವು ಇಲಿಯನ್ನು ಜೈಲಿಗೆ ಹಾಕುವ ಬಗ್ಗೆ ಮಾತನಾಡುತ್ತಿದ್ದೀರಾ. ಆದರೆ, ಪ್ರಸ್ತುತ ಮಂಡಿಸುತ್ತಿರುವ ಲೋಕಪಾಲ್ ಮಸೂದೆಯಿಂದ ಸಿಂಹವನ್ನು ಜೈಲಿಗೆ ತಳ್ಳುವಷ್ಟು ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಲೋಕಪಾಲ ಮಸೂದೆಗೆ ಪ್ರಥಮ ಆದ್ಯತೆ ನೀಡಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು. ಅಗತ್ಯವಾದಲ್ಲಿ ಅಧಿವೇಶನವನ್ನು ವಿಸ್ತರಿಸಲಾಗುವುದು ಎನ್ನುವ ಸರಕಾರದ ಹೇಳಿಕೆ ಹೊರಬಂದ ನಂತರ ಕೇಜ್ರಿವಾಲ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಎನ್ನುವಂತಹ ಯಾವುದೇ ತಪ್ಪು ಇಲ್ಲಿಯವರೆಗೆ ನಾನು ಎಸಗಿಲ್ಲ. ನನ್ನ ಜೀವನ ಕನ್ನಡಿಯಂತೆ ಸ್ಪಷ್ಟವಾಗಿದೆ ಎಂದರು. ದೆಹಲಿ ಗ್ಯಾಂಗ್ರೇಪ್ಗೆ ಬಲಿಯಾದ ನಿರ್ಭಯಾಳಿಗೆ ಶೃದ್ದಾಂಜಲಿ ಅರ್ಪಿಸಿದ ಹಜಾರೆ, ಮಹಿಳೆಯರು ತಾಯಿ ಮತ್ತು ಸಹೋದರಿಯರಿದ್ದಂತೆ. ಅವರನ್ನು ಅದೇ ರೀತಿಯಲ್ಲಿ ನೋಡಬೇಕು ಎಂದು ಮನವಿ ಮಾಡಿದರು.