ಅಪ್ಪನ ಲವ್ ಸಕ್ಸಸ್ಗೆ ಮಗನ ಯತ್ನ
ಜನಾರ್ದನ ವಿಶ್ವಾಂಬರ ರಾಣೆ(ಪರೇಶ್ ರಾವಲ್) ಒಬ್ಬ ವಿಧುರ. ಈತ ತನ್ನ ಮಕ್ಕಳಾದ ಚಿರಾಗ್ (ಮನೋಜ್ ಜೋಷಿ) ಹಾಗೂ ಗೌರವ್ (ಅಕ್ಷಯ್ ಖನ್ನಾ)ರನ್ನು ಬೆಳೆಸಲು ತನ್ನ ಜೀವ ಸವೆಸುತ್ತಾನೆ. ತನ್ನ ಮಕ್ಕಳು ತೊಟ್ಟಿಲ ಮಕ್ಕಳಾಗಿದ್ದಂದಿನಿಂದಲೇ, ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ ಜನಾರ್ದನ ವಿಶ್ವಾಂಬರ ರಾಣೆ. ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ಗೌರವ್ ತನ್ನಪ್ಪನ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ತಮ್ಮ ಗೃಹಕೃತ್ಯಗಳು ಹಾಗೂ ವ್ಯಾಪಾರವನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸರಿದೂಗಿಸಿಕೊಂಡು ಹೋಗುತ್ತಾರೆ ಈ ಅಪ್ಪ-ಮಗ.ಜನಾರ್ದನನ ಪುತ್ರ ಗೌರವ್, ತನ್ನ ತಂದೆಯನ್ನು ಮಗನಂತೆ ನೋಡಿಕೊಳ್ಳುತ್ತಾನೆ. ಶಿಸ್ತಿನ ತಂದೆ ಮಗನನ್ನು ನೋಡಿಕೊಳ್ಳುವಂತೆ ಗೌರವ್ನ ರೀತಿ ರಿವಾಜು. ಅಪ್ಪನನ್ನು ಬಯ್ತಾನೆ, ಬೆದರಿಸ್ತಾನೆ, ಜಗಳವಾಡ್ತಾನೆ ಕೆಲವೊಮ್ಮೆ ಕೋಣೆಯೊಳಗೆ ಕೂಡಿಯೂ ಹಾಕುತ್ತಾನೆ. ಇದಕ್ಕೆ ಕಾರಣ ಎಂದರೆ, ಸ್ನೇಹಿತ ಮಾಧವ್ ಮಾಥೂರ್(ಓಂ ಪುರಿ) ಸಹವಾಸದಿಂದ ತನ್ನ ತಂದೆ ಕೆಟ್ಟು ಹೋಗಬಾರದು ಎಂಬುದು. ಈ ಮಾಧವ ಮಾಥೂರ್ ಒಬ್ಬ ವಿಚ್ಛೇದಿತ. ಹೇಗಾದರೂ ಮಾಡಿ ಇನ್ನೊಂದು ಮದುವೆಯಾಗಬೇಕು ಎಂಬ ಹಪಾಹಪಿಯ ಮನುಷ್ಯ. ಈತನ ಸಹವಾಸದಿಂದ ಅಪ್ಪ ಕೆಡ್ತಾನೆ ಅನ್ನೋದು ಮಗ ಗೌರವ್ನ ಚಿಂತೆ.ಮಾಧವ್ ಮತ್ತು ಜನಾರ್ದನ್, ಮಾಧವ್ಗೊಂದು ವಧುವಿಗಾಗಿ ಭಯಂಕರ ಹುಡುಕಾಟದಲ್ಲಿರುತ್ತಾರೆ. ಆದರೆ, ಪ್ರತಿಸಾರಿಯೂ, ಅದು ಹೇಗೋ ಇಬ್ಬರೂ ಸಮಸ್ಯೆಯಲ್ಲಿ ಸಿಲುಕಿ ಬಂಧನಕ್ಕೀಡಾದಾಗ, ಮಗ ಗೌರವ್ ಜಾಮೀನು ನೀಡಿ ಬಿಡುಗಡೆ ಮಾಡಿಸಿಕೊಂಡು ಮುಜುಗರಕ್ಕೀಡಾಗುತ್ತಿದ್ದ.
ಇತ್ತ ತನ್ನ ವ್ಯಾಪಾರದಲ್ಲಿ ಮುಳುಗಿ ಹೋಗಿದ್ದ ಗೌರವ್ಗೆ ಇದೀಗ ಹೊಸ ತಲೆನೋವು. ಅನಾಮಧೇಯ ಹುಡುಗಿಯೊಬ್ಬಳು ಕೀಟಲೆಯ ಕರೆಗಳನ್ನು ನೀಡುತ್ತಿದ್ದಳು. ಮತ್ತೆ ನೋಡಿದರೆ ಆಕೆ ತನ್ನ ಕಾಲೇಜು ಸ್ನೇಹಿತೆ ಶೀಕಾ ಕಪೂರ್ (ಜೆನೆಲಿಯ ಡಿ'ಸೋಜಾ) ಶೀಕಾ ತನ್ನ ಪಾಲಕಿ ಅನುರಾಧ (ಶೋಭನಾ) ಜತೆ ಇರುತ್ತಾಳೆ. ಈ ಅನುರಾಧ ಮತ್ತು ಜನಾರ್ದನ ಈ ಹಿಂದೆ ಪ್ರೇಮಿಗಳಾಗಿದ್ದವರು.
ಹಲವಾರು ವರ್ಷಗಳ ಬಳಿಕ ಭೇಟಿಯಾದ ಅನುರಾಧ ಮತ್ತು ಜನಾರ್ದನರ ವರ್ತನೆಯಲ್ಲಿ ಬದಲಾವಣೆಯನ್ನು ಗೌರವ್ ಮತ್ತು ಶೀಕಾ ಗಮನಿಸುತ್ತಾರೆ. ಗೌರವ್ಗೆ ತಂದೆಯ ಹಳೆಯ ಪ್ರೀತಿಯ ಬಗ್ಗೆ ತಿಳಿಯುತ್ತದೆ. ಹಾಗಾಗಿ ಇದೀಗ ಅಪ್ಪನ ಪ್ರೇಮ ಸಾಫಲ್ಯಕ್ಕಾಗಿ ಮಗ ಪ್ರಯತ್ನಿಸುತ್ತಾನೆ. ಈ ದಾರಿಯಲ್ಲಿ ಸಾಗುವಾಗ ಶೀಕಾ ಮತ್ತು ಗೌರವ್ ನಡುವೆ ಪ್ರೇಮಾಂಕುರವಾಗುತ್ತದೆ. ಏತನ್ಮಧ್ಯೆ, ಮಾಧವ್ಗೆ ಸಹ ಒಂದು ವಧು ಗೊತ್ತಾಗುತ್ತದೆ.
ಈ ಮೂರು ಜೋಡಿಗಳು ಅದು ಹೇಗೆ ಒಂದಾಗುತ್ತಾರೆ ಎಂಬುದನ್ನು ತೆರೆಯಮೇಲೆ ನೋಡಿ. ಅದು ಸುಲಭದ ಹಾದಿಯಲ್ಲ. ಜನಾರ್ದನ ಮತ್ತು ಅನುರಾಧರ ವಿವಾಹದ ಸುತ್ತ ಸುತ್ತುವ ಈ ಸಿನಿಮಾ ನಿಮ್ಮನ್ನು ಸಕತ್ತಾಗಿ ನಗಿಸುವುದರಲ್ಲಿ ಸಂಶಯವೇ ಇಲ್ಲ! ಅಂದ ಹಾಗೆ ಈ ಚಿತ್ರದ ಹೆಸಲು ಮೇರೇ ಬಾಪ್ ಪೆಹಲೇ ಆಪ್.