ಅಜಯ್ ದೇವಗನ್ಗೆ ಶುಭ ಹಾರೈಸಿದ ಆಡ್ವಾಣಿ
ಕೆಲ ತಿಂಗಳ ಹಿಂದೆ ಅಮೀರ್ ಖಾನ್ ನಿರ್ದೇಶನದ ತಾರೆ ಜಮೀನ್ ಪರ್ ಚಿತ್ರವನ್ನು ನೋಡಿ ಹಿರಿಯ ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ ಕಣ್ಣೀರು ಹರಿಸಿದ್ದರು. ಪ್ರಸಾರ ಭಾರತಿಯ ಫಿಲ್ಮ್ ಡಿವಿಷನ್ ಆಡಿಟೋರಿಯಂನಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆಡ್ವಾಣಿಯವರು ಚಿತ್ರ ವೀಕ್ಷಣೆಯಲ್ಲಿ ಸಾಕಷ್ಚು ಆಸಕ್ತಿ ಹೊಂದಿದ್ದಾರೆ ಎನ್ನುವ ವಿಷಯವನ್ನು ಅರಿತ ಅಮೀರ್ ಖಾನ್ ಈ ಪ್ರದರ್ಶನ ಏರ್ಪಡಿಸಿದ್ದರು. ಆಡ್ವಾಣಿಯವರು ಈ ಬಾರಿ ಅಜಯ್ ದೇವಗನ್ರ ಮೊದಲ ನಿರ್ದೇಶನದ ಚಿತ್ರ ಯು, ಮಿ ಔರ್ ಹಮ್ ಚಿತ್ರವನ್ನು ವೀಕ್ಷಿಸಿದರು. ನವದೆಹಲಿಯಲ್ಲಿ ಲೋಕಸಭಾ ಸದಸ್ಯ
ರವಿಶಂಕರ್ ಪ್ರಸಾದ್ ಈ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಜಯ್ ದೇವಗನ್, ಆಡ್ವಾಣಿ ದಂಪತಿಗಳು, ಕಾಜೋಲ್, ರವಿ ಶಂಕರ್ ಪ್ರಸಾದ್ ಮತ್ತು ಸುಷ್ಮಾ ಸ್ವರಾಜ್ ಅಲ್ಲದೆ, ಚಿತ್ರದ ತಾರಾಂಗಣದಲ್ಲಿರುವ ಕರಣ್ ಖನ್ನಾ, ಸುಮಿತ್ ರಾಘವನ್ ಮತ್ತು ದಿವ್ಯಾ ದತ್ತಾ ಭಾಗವಹಿಸಿದ್ದರು.
ಚಿತ್ರ ವೀಕ್ಷಿಸಿದ ಆಡ್ವಾಣಿಯವರು, ಅಜಯ್ ದೇವಗನ್ ಅವರನ್ನು ಶ್ಲಾಘಿಸಿದ್ದಾರೆ. ಚಿತ್ರ ಹೃದಯ ಮುಟ್ಟುವಂತಿದೆ. ಅಜಯ್ ಪ್ರಯತ್ನಕ್ಕೆ ಯಶಸ್ಸು ಸಿಕ್ಕಲಿ ಎಂದು ಅವರು ಹಾರೈಸಿದರು.
ಅಮೀರ್ ನಂತರ ಅಜಯ್ ನಿರ್ದೇಶನದ ಪರಂಪರೆಯನ್ನು ಮುಂದುವರೆಸುವಂತಿದೆ. ಅಜಯ್ ನಿರ್ದೇಶನದ ಈ ಚಿತ್ರ ಈ ಶುಕ್ರವಾರ ತೆರೆ ಕಾಣಲಿದೆ.