Select Your Language

Notifications

webdunia
webdunia
webdunia
webdunia

ಶ್ರೀಲಂಕಾದ ದಟ್ಟಡವಿಯ ಬೆಚ್ಚಿಬೀಳಿಸುವ ಕಥೆ: ಅಗ್ಯಾತ್!

ಶ್ರೀಲಂಕಾದ ದಟ್ಟಡವಿಯ ಬೆಚ್ಚಿಬೀಳಿಸುವ ಕಥೆ: ಅಗ್ಯಾತ್!
IFM
'ಅಗ್ಯಾತ್- ಯು ಕಾಂಟ್ ಎಸ್ಕೇಪ್ ದಿ ಅನ್ನೋನ್'. ರಾಮ್‌ಗೋಪಾಲ್ ವರ್ಮಾರ ಚಿತ್ರ ಅಂದರೆ ವಿಶೇಷವಾಗಿ ವಿವರಿಸಬೇಕಾಗಿಲ್ಲ. ಅಗ್ಯಾತ್ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ ನಿಮ್ಮನ್ನು ಹೆದರಿಸಲು ಬರುತ್ತಿದ್ದಾರೆ. ಹೌದು. ಹೇಳಿ ಕೇಳಿ ಅಗ್ಯಾತ್ ಒಂದು ಥ್ರಿಲ್ಲರ್ ಕಥಾನಕ ಎಂದು ಹೆಸರು ಕೇಳಿದಾಗಲೇ ಅರ್ಥವಾಗುತ್ತದೆ.

ಚಿತ್ರ ತಂಡದ ಕಥೆಯ ಸಿನಿಮಾ ಶೂಟಿಂಗ‌್‌ಗೆಂದು ಶ್ರೀಲಂಕಾದ ದಟ್ಟ ಅರಣ್ಯಕ್ಕೆ ಸಾಗುವಲ್ಲಿಂದ ಅಗ್ಯಾತ್ ಚಿತ್ರ ಆರಂಭ ಪಡೆಯುತ್ತದೆ. ಚಿತ್ರೀಕರಣದಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಚಮತ್ಕಾರ ಇರುತ್ತದೆ. ಈ ಚಮತ್ಕಾರದೊಂದಿಗೆ ಗರ್ವ, ದರ್ಪಗಳೂ ಮಿಳಿತವಾಗಿ ಪ್ರತಿಯೊಂದು ಪಾತ್ರವೂ ಅದರದ್ದೇ ಆದ ವೈಖರಿಯಲ್ಲಿ ವರ್ತಿಸುತ್ತಾ ಹೋಗುತ್ತದೆ. ಹಾಗೆ ಚಿತ್ರೀಕರಣಕ್ಕೊಂದು ಹೋದ ತಂಡದ ಶೂಟಿಂಗ್ ಮಾತ್ರ ಅರ್ಧದಲ್ಲೇ ನಿಲ್ಲುತ್ತದೆ. ಕಾರಣ, ಕ್ಯಾಮರಾ ತೊಂದರೆ. ಕ್ಯಾಮರಾ ಕೈಕೊಟ್ಟು ಚಿತ್ರೀಕರಣ ತಾತ್ಕಾಲಿಕವಾಗಿ ನಿಂತಾಗ, ಚಿತ್ರತಂಡ ಇನ್ನೊಂದು ಕ್ಯಾಮರಾ ತರುವವರೆಗೆ ಇರುವ ಸಮಯವನ್ನು ಕಳೆಯಲು ಅಲ್ಲೇ ದಟ್ಟಡವಿಯಲ್ಲಿ ಚಾರಣ ಹೋಗಲು ನಿರ್ಧರಿಸುತ್ತಾರೆ.

ಚಾರಣಕ್ಕಾಗಿ ಒಬ್ಬ ಅರಣ್ಯ ಸಿಬ್ಬಂದಿಯನ್ನೂ ಸಹಾಯಕರಾಗಿ ಪಡೆಯುತ್ತಾರೆ. ಆದರೆ, ಒಂದು ರಾತ್ರಿ ಆ ಸಹಾಯಕ ಭಯದಿಂದ ನಡುಗಿ ಹೋಗಿ ಸತ್ತುಹೋಗುತ್ತಾನೆ. ಈ ಸನ್ನಿವೇಶದ ನಂತರ ಅಗ್ಯಾತ್ 360 ಡಿಗ್ರಿಯ ಭಾರೀ ತಿರುವನ್ನೇ ಪಡೆದುಕೊಳ್ಳುತ್ತದೆ. ಮೌನವಾದ ಆ ಅರಣ್ಯದ ಕತ್ತಲಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಆ ಭಯ ಚಿತ್ರತಂಡದುದ್ದಕ್ಕೂ ವ್ಯಾಪಿಸುತ್ತದೆ. ಅಜ್ಞಾತ ವಸ್ತುವೊಂದರಿಂದ ಈ ವಿಪರೀತ ಸಂದರ್ಭ ಏರ್ಪಟ್ಟು ಚಿತ್ರತಂಡ ಅನುಭವಿಸುವ ತೊಂದರೆಯ ಹಾರರ್ ಥ್ರಿಲ್ಲರ್ ಕಥಾನಕವಿದು. ಅಜ್ಞಾತ ವಸ್ತು ಪ್ರಾಣಿ ರೂಪಿಯೋ, ಮನುಷ್ಯ ರೂಪಿಯೋ... ಅಥವಾ ಅಜ್ಞಾತ ರೂಪಿಯೋ... ಎಂಬುದು ಇನ್ನೂ ಚಿತ್ರ ಬಿಡುಗಡೆಯಾದ ಮೇಲಷ್ಟೆ ತಿಳಿಯಬೇಕು.

webdunia
IFM
ಈವರೆಗೆ ಬಾಲಿವುಡ್ ಚಿತ್ರರಂಗದಲ್ಲಿ ಕಂಡಿರದ ಶ್ರೀಲಂಕಾದ ದಟ್ಟ ಕಾಡುಗಳ ನಡುವೆ ಅಗ್ಯಾತ್ ಚಿತ್ರೀಕರಣ ನಡೆದಿದೆ. ರಾಮ್ ಗೋಪಾಲ್ ವರ್ಮಾ ಹಾಗೂ ರಾನಿ ಸ್ಕ್ರೀವಾಲಾ ನಿರ್ಮಿಸಿರುವ ಈ ಚಿತ್ರದ ಪ್ರೋಮೋಗಳನ್ನು ನೋಡಿದರೆ ಮೈನವಿರೇಳಿಸುವ ದಟ್ಟಡವಿಯ ಚಿತ್ರಗಳಿವೆ. ಒಟ್ಟಾರೆ ಈಗಲೇ ವರ್ಮಾ ಹೆದರಿಸುವ ಸೂಚನೆಯೊಂದಿಗೆ ಭಾರೀ ಕುತೂಹಲವನ್ನೇ ಸೃಷ್ಟಿಸಿದ್ದಾರೆ. ಇದು ಖಂಡಿತವಾಗಿಯೂ 2009ರ ಹಿಟ್ ಚಿತ್ರವಾಗಲಿದೆ ಎಂಬ ನಂಬಿಕೆಯೂ ವರ್ಮಾರದ್ದು.

''ಅಜ್ಞಾತ ವಸ್ತುವಿನ ಶಬ್ದ ಕೇಳಿತೆಂದರೆ ನೀವು ಓಡಿ ತಪ್ಪಿಸಿಕೊಳ್ಳಬಹುದು. ನೋಡಬಹುದೆಂದಾರೆ ಅಡಗಿ ತಪ್ಪಿಸಿಕೊಳ್ಳಬಹುದು. ಅದಕ್ಕೆ ದೇಹವಿದ್ದರೆ ಅದನ್ನು ಕೊಲ್ಲಬಹುದು. ಆದರೆ....'' ಎಂದು ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರಕ್ಕೆ ಕೆಲವೇ ಸಾಲುಗಳ ವಿವರಣೆ ನೀಡಿ ಏಸಿಯ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಭಾರೀ ಶಬ್ದಗಳ ತಂತ್ರಜ್ಞಾನವನ್ನೂ ಬಳಸಿದ್ದು ಭಯದ ವಾತಾವರಣಕ್ಕೆ ಇದು ಪುಷ್ಟಿ ನೀಡಲಿದೆಯಂತೆ. ಜತೆಗೆ, ಈವರೆಗೆ ಕಂಡಿರದ ದಟ್ಟಡವಿಯ ಅದ್ಭುತವಾದ ಕ್ಯಾಮರಾ ಕೈಚಳಕವೂ ಇಲ್ಲಿದೆಯಂತೆ.

ಚಿತ್ರದಲ್ಲಿ ನಿತಿನ್ ರೆಡ್ಡಿ, ಪ್ರಿಯಾಂಕ ಕೊಠಾರಿ(ನಿಶಾ ಕೊಠಾರಿ), ರವಿ ಕಾಳೆ ಮತ್ತಿತರರ ತಾರಾಬಳಗವಿದೆ. ಪ್ರಿಯಾಂಕಾಗೆ ಇದರಲ್ಲಿ ವಿಭಿನ್ನ ಪಾತ್ರವಂತೆ. ಒಟ್ಟಾರೆ ಚಿತ್ರ ಬಿಡುಗಡೆಗೆ ಆಗಸ್ಟ್ 7ರವರೆಗೂ ಕಾಯಬೇಕು.
webdunia
IFM

Share this Story:

Follow Webdunia kannada