ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕಳಂಕಿತರ ಹೆಸರು
ನವದೆಹಲಿ , ಶುಕ್ರವಾರ, 14 ಮಾರ್ಚ್ 2014 (17:43 IST)
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಳಂಕಿತರ ಹೆಸರು ಕೂಡ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಚಂದೀಗಢ ಸ್ಥಾನಕ್ಕೆ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಿದೆ. ಲಂಚದ ಹಗರಣಕ್ಕೆ ಸಂಬಂಧಿಸಿದಂತೆ ಬನ್ಸಾಲ್ ಸಚಿವ ಸ್ಥಾನಕ್ಕೆ ಈ ಹಿಂದೆ ರಾಜೀನಾಮೆ ನೀಡಿದ್ದರು. ರೈಲ್ವೆ ಮಂಡಳಿಯ ಸದಸ್ಯನು ಒಳಗೊಂಡ ಲಂಚದ ಹಗರಣದಲ್ಲಿ ಬನ್ಸಾಲ್ ಸೋದರಳಿಯ ಪ್ರಮುಖ ಆರೋಪಿಯಾಗಿದ್ದರಿಂದ ಕಾಂಗ್ರೆಸ್ ಪಟ್ಟಿಯಿಂದ ಬನ್ಸಾಲ್ ಹೆಸರನ್ನು ಕೈಬಿಡಲಾಗುವುದೆಂಬ ಊಹಾಪೋಹ ಹರಡಿತ್ತು. ಬನ್ಸಾಲ್ ಪ್ರಸಕ್ತ ಚಂದೀಗಢದ ಸಂಸದರಾಗಿದ್ದು, ಸಿಬಿಐ ತನಿಖೆ ಬಳಿಕ ದೋಷಮುಕ್ತರಾಗಿದ್ದರು.ಕಾಂಗ್ರೆಸ್ ಪಟ್ಟಿಯಲ್ಲಿ ಉತ್ತರಪ್ರದೇಶ ಘಟಕದ ಮಾಜಿ ಮುಖ್ಯಸ್ಥರಾದ ರೀಟಾ ಬಹುಗುಣ ಜೋಷಿ ಲಕ್ನೋದಿಂದ ಕಣಕ್ಕಿಳಿಯಲಿದ್ದಾರೆ ಮತ್ತು ಶಶಿ ತರೂರ್ ತಿರುವನಂತಪುರ ಕ್ಷೇತ್ರ, ಕೆ.ವಿ. ಥಾಮಸ್ ಎರ್ನಾಕ್ಯುಲಂ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಎರಡನೇ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ವಿ. ನಾರಾಯಣ ಸ್ವಾಮಿ, ಕೆ.ಸಿ. ವೇಣುಗೋಪಾಲ್ ಮತ್ತು ಕೆ.ವಿ. ಥಾಮಸ್ ಅವರನ್ನು ಕೂಡ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.