ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ನೂತನ ಯೋಜನೆಗೆ ಚಾಲನೆ ನೀಡಲು ಸಜ್ಜಾಗಿದ್ದು, ನಗರದ ಎಲ್ಲಾ ಸಾರಿಗೆ ಬಸ್ಗಳಲ್ಲಿ ವುಮನ್ ಸೇಫ್ಟಿ ಬೆಲ್ನ್ನು ಅಳವಡಿಸಲು ನಿರ್ಧರಿಸಿದೆ.
ಯೋಜನೆ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಿಳೆಯರ ಸೂಕ್ತ ರಕ್ಷಣೆಗಾಗಿ ಸರ್ಕಾರ ಈ ಯೋಜನೆಗೆ ಕೈ ಹಾಕಿದ್ದು, ನಗರದಲ್ಲಿ ಸಂಚರಿಸುತ್ತಿರುವ ಮಹಾನಗರ ಪಾಲಿಕೆಯ ಎಲ್ಲಾ ಬಸ್ಗಳಲ್ಲಿ ಈ ಬೆಲ್ಲನ್ನು ಅಳವಡಿಸಲಾಗುವುದು. ಈ ಸಂಬಂಧ ಈಗಾಗಲೇ ನಮ್ಮ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶೀಘ್ರವೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆಂದೇ ಸೀಮಿತಗೊಳಿಸಿರುವ ಎಲ್ಲಾ ಸೀಟುಗಳ ಪಕ್ಕದಲ್ಲಿ ಈ ಬೆಲ್ಲನ್ನು ಅಳವಡಿಸಲಾಗುವುದು. ಪ್ರಯಾಣಿಸುವಾಗ ಇತರೆ ಪುರುಷ ಪ್ರಯಾಣಿಕರು ಯಾವುದೇ ರೀತಿಯಾದ ಕಿರುಕುಳ ನೀಡಿದಲ್ಲಿ ಮಹಿಳೆಯರು ಈ ಬೆಲ್ಗಳನ್ನು ಒತ್ತಬಹುದಾಗಿದೆ. ಆ ಬಸ್ನ ಮೂಲಕ ಚಾಲಕ ಹಾಗೂ ನಿರ್ವಾಹಕಿಗೆ ತಿಳಿಸಬಹುದು. ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು. ಒಟ್ಟಾರೆಯಾಗಿ ಪುರುಷರು ಎಸಗುವ ಲೈಂಗಿಕ ಕಿರುಕುಳದಿಂದ ಮಹಿಳೆಯರು ಸುರಕ್ಷಿತವಾಗಿರಲು ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ ಎಂದರು.