ಮೈಸೂರು ರಾಜವಂಶದ 27ನೇ ರಾಜರ ಪಟ್ಟಾಭಿಷೇಕ ಮಹೋತ್ಸವಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿ ಅಧಿಕೃತವಾಗಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.
ಹೌದು, ಸ್ವರ್ಣ ಬಣ್ಣದಿಂದ ಮುದ್ರಿಸಲಾಗಿರುವ ಆಹ್ವಾನ ಪತ್ರಿಕೆಯನ್ನು ಆಡಳಿತ ಮಂಡಳಿ ಇಂದು ಬಿಡುಗಡೆಗೊಳಿಸಿದ್ದು, ಪತ್ರಿಕೆಯಲ್ಲಿ 'ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ಲಗ್ನಪತ್ರಿಕೆ' ಎಂಬ ತಲೆ ಬರಹವನ್ನು ಮುದ್ರಿಸಲಾಗಿದೆ. ಅಲ್ಲದೆ ನೂತನ ರಾಜನಾಗಿ ಸಿಂಹಾಸನ ಏರುತ್ತಿರುವ ರಾಜ ಯದುವೀರ್ ಕೃಷ್ಣರಾಜ ಒಡೆಯರ್ ಅವರಿಗೆ ಸಾರ್ವಜನಿಕರು ಭಾಗವಹಿಸಿ ಶುಭ ಹಾರೈಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಯದುವೀರ್ ರಾಜವಂಶದ 27ನೇ ರಾಜರಾಗಿ ಸಿಂಹಾಸನ ಏರುತ್ತಿದ್ದು, ಪಟ್ಟಾಭಿಷೇಕ ಕಾರ್ಯಕ್ರಮವು ಮೇ 27 ಮತ್ತು 28ರಂದು ಆಯೋಜಿಸಲಾಗಿದೆ. ಅಧಿಕೃತವಾಗಿ ಮೇ 28ರಂದು ಪಟ್ಟಾಭಿಷೇಕ ಮಾಡಿಕೊಳ್ಳುವ ಮೂಲಕ ಯದುವೀರ್ ಅರಮನೆಯ ನೂತನ ರಾಜರಾಗಲಿದ್ದಾರೆ.
ಅರಮನೆಯಲ್ಲಿ 40 ವರ್ಷಗಳ ಬಳಿಕ ಮತ್ತೆ ಪಟ್ಟಾಭಿಷೇಕ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 1974ರಲ್ಲಿ ರಾಜವಂಶದ 26ನೇ ರಾಜರಾಗಿ ದಿ.ಡಾ.ಶ್ರೀಕಂಠದತ್ತ ಒಡೆಯರ್ ಅವರು ಅಧಿಕಾರ ವಹಿಸಿಕೊಂಡಿದ್ದರು.