ಚುನಾವಣೆ ಸಂದರ್ಭದಲ್ಲಿ ಹಣ ಹಂಚಿಕೆ ಸರ್ವೇಸಾಮಾನ್ಯ ಎಂದು ಮತದಾನದ ಬಳಿಕ ಆರ್.ಟಿ. ನಗರ ಬೋಸ್ಟನ್ ಶಾಲೆಯಲ್ಲಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಚುನಾವಣೆ ಮತದಾನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಹೆಬ್ಬಾಳ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹಂಚಿಕೆ ಮಾಡಿದ ಆರೋಪ ಕೇಳಿಬಂದಿತ್ತು.
ಹಣ ಹಂಚಿಕೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ ಚುನಾವಣೆ ತಂತ್ರಗಾರಿಕೆಯಲ್ಲಿ ಬಿಜೆಪಿ ನಿಸ್ಸೀಮರಾಗಿದ್ದಾರೆ ಎಂದು ಗುಂಡೂರಾವ್ ಹೇಳಿದರು. ನಾನು ಇದೇ ಕ್ಷೇತ್ರದ ಮತದಾರ, ನನ್ನನ್ನು ನಾಯಕನನ್ನಾಗಿಸಿದ ಪಕ್ಷಕ್ಕೆ ದುಡಿಯಬಾರದೇ ಎಂದು ಗುಂಡೂರಾವ್ ಪ್ರಶ್ನಿಸಿದರು.
ಡಿ.ವಿ. ಸದಾನಂದಗೌಡರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ. ದತ್ತು ಸಂಪ್ರದಾಯ ಆರಂಭಿಸಿದ್ದೇ ಯಡಿಯೂರಪ್ಪ. ಆದರೆ ನಾನು ಹೆಬ್ಬಾಳ ಕ್ಷೇತ್ರವನ್ನು ದತ್ತು ತೆಗೆದುಕೊಂಡಿಲ್ಲ ಎಂದು ಗುಂಡೂರಾವ್ ಸ್ಪಷ್ಟಪಡಿಸಿದರು.