ಬೆಂಗಳೂರಿನ ಪೀಣ್ಯ ಮುಖ್ಯರಸ್ತೆಯ ಎಸ್ಆರ್ಎಸ್ ಕ್ರಾಸ್ ಬಳಿ ಕಳೆದ ಭಾನುವಾರ ಬೆಳಿಗ್ಗೆ ಬೈಕ್ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಫಘಾತದಲ್ಲಿ ಗಾಯಗೊಂಡಿದ್ದ 29 ವರ್ಷದ ಸುನಿತಾ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಆಕೆಯ 7 ವರ್ಷದ ಮಗ ಅಪಘಾತ ನಡೆದಾಗ ಸ್ಥಳದಲ್ಲೇ ಮೃತ ಪಟ್ಟಿದ್ದ . ಆದರೆ ತಾಯಿ ಗಂಭೀರವಾಗಿ ಗಾಯಗೊಂಡಿದ್ದಳು.
ಚಿಕ್ಕಬಾಣಾವರದಲ್ಲಿರುವ ತಾಯಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದ ಕಾರಣ ಗಾಯತ್ರಿ ನಗರದ ನಿವಾಸಿ ಸುನಿತಾ ತನ್ನ ಮಗ ಲಿಖಿತ್ ಗೌಡ ಜೊತೆ ತೆರಳುತ್ತಿದ್ದರು. ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಬಾಲಕ ಕೆಳಗೆ ಬೀಳುತ್ತಿದ್ದಂತೆ, ಆತನ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಕಣ್ಣ ಮುಂದೆಯೇ ಪ್ರಾಣ ಬಿಟ್ಟ ಕಂದಮ್ಮನನ್ನು ನೋಡಿ, ತಾಯಿ ಮೂರ್ಛೆ ಹೋಗಿದ್ದಳು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದುರ್ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್ ಚಾಲಕನನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದರು.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.