ರಾಜ್ಯದಲ್ಲಿನ ಬರ ಹಾಗೂ ರೈತರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಸ್ತೃತ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಪದೇ ಪದೇ ಎದ್ದು ಹೋಗುತ್ತಿದ್ದುದನ್ನು ಕಂಡ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿ ತೀವ್ರ ತರಾಟೆಗೆ ತೆಗೆದುಕೊಂಡ ಸನ್ನಿವೇಶ ಕಂಡು ಬಂತು.
ಹೌದು, ನಗರದ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಬರ ಪರಿಹಾರ ಹಾಗೂ ರೈತರ ಆತ್ಮಹತ್ಯೆ ಸಂಬಂಧ ಇಲಾಖಾ ಹಾಗೂ ಜಿಲ್ಲಾವಾರು ಸಮಸ್ಯೆಗಳನ್ನು ಪರಿಗಣಿಸಿ ಅಧಿಕಾರಿಗಳೊಂದಿಗೆ ಸೂಕ್ತವಾಗಿ ಚರ್ಚಿಸಲಾಗುತ್ತಿತ್ತು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಉಮೇಶ್ ಅವರು ಪದೇ ಪದೇ ಹೊರಗೆ ಎದ್ದು ಹೋಗುತ್ತಿದ್ದರು. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ, ರೈತರ ಆತ್ಮಹತ್ಯೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿರುವಾಗ ಹಾಗೆ ಪದೇ ಪದೇ ಎದ್ದು ಹೋದರೆ ಹೇಗೆ ನಾನ್ ಸೆನ್ಸ್, ಗಂಭೀರವಾಗಿರಿ. ಇದು ಮಕ್ಕಳ ಆಟವಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯದ ಯಾವ ಜಿಲ್ಲೆಯಗಳಲ್ಲಿ ಎಷ್ಟು ಪ್ರಮಾಣದ ಬರಗಾಲವಿದೆ. ಅಲ್ಲದೆ ಯಾವ ಜಿಲ್ಲೆಗಳಲ್ಲಿ ಎಷ್ಟು ಮಂದಿ ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ವೇಳೆ ಈ ಸನ್ನಿವೇಶ ಕಂಡುಬಂದಿದೆ.