ಕೇಂದ್ರದಲ್ಲಿ ರಾಜ್ಯದಿಂದ ಸಂಸದರಾಗಿ ಆಯ್ಕೆಯಾದವರಲ್ಲಿ ಯಾರಿಗೆ ಸಚಿವ ಪಟ್ಟ ಒಲಿಯಬಹುದು ಎಂಬ ಪ್ರಶ್ನೆ ಈಗ ಕುತೂಹಲ ಕೆರಳಿಸಿದೆ. ಬೆಂಗಳೂರು ದಕ್ಷಿಣ ಅನಂತಕುಮಾರ್ ಅವರು 6 ಬಾರಿ ಸಂಸದರಾಗಿ ಗೆದ್ದಿದ್ದು, ಬಿಜೆಪಿಯ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಸಚಿವ ಪಟ್ಟ ಸಿಗುವುದು ಬಹುತೇಕ ಖಚಿತವೆಂದು ತಿಳಿಯಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜಯಗಳಿಸಿದ ಡಿ.ವಿ. ಸದಾನಂದ ಗೌಡರಿಗೆ ಸಚಿವ ಸ್ಥಾನ ಒಲಿಯಬಹುದೆಂದು ಹೇಳಲಾಗಿದೆ.
ಪ್ರಹ್ಲಾದ್ ಜೋಷಿ, ಬಿಜಾಪುರ ಕ್ಷೇತ್ರದ ರಮೇಶ್ ಜಿಗಜಿಣಗಿ ಅವರಿಗೆ ಕೂಡ ಸಚಿವ ಸ್ಥಾನ ಸಿಗಬಹುದೆಂದು ಹೇಳಲಾಗುತ್ತಿದೆ. ಆದರೆ ಶಿವಮೊಗ್ಗ ಕ್ಷೇತ್ರದಿಂದ ಗೆದ್ದಿರುವ ಯಡಿಯೂರಪ್ಪನವರಿಗೆ ಸಚಿವ ಪಟ್ಟ ಸಿಗುತ್ತದೆಯೇ ಎನ್ನುವುದು ಕುತೂಹಲಕಾರಿಯಾದ ಅಂಶವಾಗಿದೆ. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದರೂ ಬಿಜೆಪಿ ತಮ್ಮ ಮಡಿಲಿಗೆ ಸೇರಿಸಿಕೊಂಡು ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಳಿಸಿತ್ತು.
ಈಗ ಯಡಿಯೂರಪ್ಪ ಗೆದ್ದು ಸಂಸದರಾಗಿರುವುದರಿಂದ ಅವರಿಗೆ ಸಚಿವ ಪಟ್ಟ ಕೊಡುವುದಕ್ಕೆ ಮೋದಿ ಸಮ್ಮತಿಸುತ್ತಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಸಮರ ಸಾರಿದ ಮೋದಿ ಯಡಿಯೂರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಭ್ರಷ್ಟರ ಸಂಪುಟವೆಂಬ ಅಪಖ್ಯಾತಿಗೆ ಒಳಪಡುವುದು ಬಿಜೆಪಿಗೆ ಇಷ್ಟವಿಲ್ಲವೆಂದು ಭಾವಿಸಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಮಹಿಳೆ ಎಂಬ ಆಧಾರದ ಮೇಲೆ ಸಚಿವ ಪಟ್ಟ ಸಿಗಬಹುದೆಂದೂ ಎಣಿಸಲಾಗಿದೆ.