ರಾಹುಲ್ ಗಾಂಧಿಯನ್ನು ಟೀಕಿಸುತ್ತಿರುವವರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ, ಆರೋಗ್ಯ ಸಚಿವ ಯು.ಟಿ. ಖಾದರ್ ತಮ್ಮ ನಾಯಕನನ್ನು ಟೀಕಿಸುವವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅಂತವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ಎಷ್ಟೇ ಬುದ್ಧಿವಂತನಾಗಿದ್ರೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಮೊಬೈಲ್ ನೋಡಿ ಸಂದೇಶ ಬರೆದಿರುವುದರಲ್ಲಿ ತಪ್ಪೇನು? ಇಷ್ಟು ಚಿಕ್ಕ ವಿಷಯಕ್ಕೆ ರಾಹುಲ್ ಅವರನ್ನು ಟೀಕಿಸುವವರು ಮಾನಸಿಕ ಅಸ್ವಸ್ಥರು. ಅವರಿಗೆ ಉಚಿತವಾದ ಚಿಕಿತ್ಸೆ ಕೊಡಿಸಲು ಬೆಂಗಳೂರಿನಲ್ಲಿ ನಿಮಾನ್ಸ್ ಆಸ್ಪತ್ರೆ ಇದೆ. ಅಂತವರನ್ನು ಸರಕಾರದ ವತಿಯಿಂದ ನಿಮಾನ್ಸ್ಗೆ ಸೇರಿ ಚಿಕಿತ್ಸೆ ಕೊಡಿಸುತ್ತೇವೆ", ಎಂದು ಖಾದರ್ ಕಿಡಿಕಾರಿದ್ದಾರೆ.
ರಾಜಧಾನಿಯಲ್ಲಿರುವ ನೇಪಾಳ ರಾಯಭಾರ ಕಚೇರಿಗೆ ಶುಕ್ರವಾರ ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಂದರ್ಶಕರ ಪುಸ್ತಕದಲ್ಲಿ ತಮ್ಮ ಸಂತಾಪ ಸಂದೇಶವನ್ನು ಬರೆದಿದ್ದರು. ಆಗ ಅವರು ತಮ್ಮ ಮೊಬೈಲ್ ಫೋನ್ನಲ್ಲಿದ್ದ ಪಠ್ಯವನ್ನು ನಕಲು ಮಾಡಿ ಬರೆಯುತ್ತಿರುವುದು ಟಿವಿ ಕ್ಯಾಮೆರಾಗಳು ಸೆರೆಹಿಡಿದಿದ್ದು, ಆ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋಟೋ ಹಾಗೂ ವಿಡಿಯೋಗಳಿಗೆ ವ್ಯಾಪಕ ಕುಚೇಷ್ಠೆಯ ಪ್ರತಿಕ್ರಿಯೆಗಳು ಬರುತ್ತಿವೆ.