ನನಗೆ ಕನ್ನಡ ಭಾಷೆ ಬರುವುದಿಲ್ಲ, ಆದರೂ ಸಿಎಂ ಸಿದ್ದರಾಮಯ್ಯ ಹೇಳಿದ್ದು ಅರ್ಥವಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದ ಭಾವನೆಯನ್ನು ಕೇಂದ್ರ ಅರ್ಥಮಾಡಿಕೊಳ್ಳಬೇಕು. ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಬೇಕು ಎಂದು ತುಮಕೂರಿನ ವಸಂತನರಸಾಪುರದ ಮೆಗಾ ಫುಡ್ಪಾರ್ಕ್ ಉದ್ಘಾಟಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಪಕ್ಷ ಯಾವುದೇ ಆದರೂ ರಾಜ್ಯ ಮತ್ತು ಕೇಂದ್ರ ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯದ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಭಾರತ ಕೃಷಿ ಪ್ರಧಾನ ರಾಷ್ಟ್ರ. ಆದರೆ ಕೃಷಿಕರ ಸ್ಥಿತಿ ಇವತ್ತು ಏನಾಗಿದೆ ಎಂದು ಪ್ರಧಾನಿ ಪ್ರಶ್ನಿಸಿದರು. ನಾವು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಗ್ರಾಮದ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಮೋದಿ ಹೇಳಿದರು. ಇವತ್ತು ವಿಶೇಷವಾದ ದಿನ.ಫುಡ್ಪಾರ್ಕ್ ಯೋಜನೆ ಅನ್ನಬ್ರಹ್ಮನ ಪೂಜೆ. ಆಹಾರ ಸಂಸ್ಕರಣೆ ನಮ್ಮಲ್ಲಿ ಹೊಸದಲ್ಲ, ಆದರೆ ಇದನ್ನು ವೈಜ್ಞಾನಿಕವಾಗಿ ಮಾಡಬೇಕಿದೆ.
ಭಾರತದ ರೈತ ಜಗತ್ತಿನ ಅನೇಕ ದೇಶಗಳ ಜನರ ಹೊಟ್ಟೆ ತುಂಬಿಸಬಲ್ಲ. ಹಳ್ಳಿಗಳ ಜನರ ಖರೀದಿ ಶಕ್ತಿ ಹೆಚ್ಚಿದರೆ ಮಾತ್ರ ಭಾರತ ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಪ್ರಧಾನಿ ನುಡಿದರು. ಫುಡ್ಪಾರ್ಕ್ ಯೋಜನೆ ಅನ್ನಬ್ರಹ್ಮನ ಪೂಜೆ. ನಮ್ಮ ಸಂಬಾರು ಪದಾರ್ಥಗಳು ತುಂಬಾ ಜನಪ್ರಿಯವಾಗಿದ್ದವು. ದೇಶದ ಅಭಿವೃದ್ಧಿಯಾಗಬೇಕಾದರೆ ರೈತರ ಅಭಿವೃದ್ಧಿಯಾಗಬೇಕು. ಆದರೆ ರೈತರ ಸ್ಥಿತಿ ಹೀನಾಯವಾಗಿದೆ ಎಂದು ಪ್ರಧಾನಿ ವಿಷಾದಿಸಿದರು.
ಪೆಪ್ಸಿ, ಕೋಕೋಕೋಲಾ ಕುಡಿಯುತ್ತೇವೆ. ಆದರೆ ಶೇ. 5ರಷ್ಟು ನೈಸರ್ಗಿಕ ಹಣ್ಣಿನ ರಸ ಬಳಸಲು ಸಾಧ್ಯವೇ, ಸಾಧ್ಯವಾದರೆ ಹಣ್ಣುಬೆಳೆಗಾರರ ಅದೃಷ್ಟ ಬದಲಾಗುತ್ತದೆ. ಸಿದ್ಧ ಆಹಾರ ನೀಡಿದರೆ ಸ್ವೀಕರಿಸಲು ಇಡೀ ವಿಶ್ವ ಸಿದ್ಧವಾಗಿದೆ. ಜೈ ಜವಾನ್, ಜೈಕಿಸಾನ್ ಎಂದು ಹೇಳಿ ಮೋದಿ ತಮ್ಮ ಭಾಷಣವನ್ನು ಮುಗಿಸಿದರು.