ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೈಕೈ ಮಿಲಾಯಿಸಿದ ಠಾಣೆಯ ಇಬ್ಬರು ಪಿಎಸ್ಐಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಗಣೇಶ್ ಮತ್ತು ಲಿಂಗಪ್ಪ ಎನ್ನುವ ಸಬ್ಇನ್ಸ್ಪೆಕ್ಟರ್ಗಳಿಬ್ಬರನ್ನು ಅಮಾನತು ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್. ಲೋಕೇಶ್ ಕುಮಾರ್ ಆದೇಶ ನೀಡಿದ್ದಾರೆ. ಜಯಂತಿ ಪವಾರ್ ಎನ್ನುವವರು ನಾಗರತ್ಮಮ್ಮ ಎಂಬುವರಿಂದ 15 ಲಕ್ಷ ರೂ. ಸಾಲ ಪಡೆದಿದ್ದರು.
ಆದರೆ ಹಣ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಜಯಂತಿ ಪವಾರ್ ಅವರು ಈ ಕುರಿತು ನಾಗರತ್ನಮ್ಮ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಈ ಸಂಬಂಧ ಲಿಂಗಪ್ಪ ಅವರು ನಾಗರತ್ನಮ್ಮ ಮತ್ತು ಜಯಂತಿ ಪವಾರ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾಗ ಇನ್ನೊಬ್ಬರು ಎಸ್ಐ ಗಣೇಶ್ ಅಲ್ಲಿಗೆ ಆಗಮಿಸಿ ನಿಮ್ಮನ್ನು ಠಾಣೆಗೆ ಕರೆಸಿದ್ದು ಯಾರೆಂದು ಪ್ರಶ್ನಿಸಿದ ನಂತರ ಗಣೇಶ್ ಮತ್ತು ಲಿಂಗಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಎಳೆದಾಡಿದರು.
ಇದರಿಂದ ಠಾಣೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಡಿಸಿಪಿ ಲೋಕೇಶ್ ಕುಮಾರ್ ಈ ಕುರಿತು ಠಾಣೆಗೆ ಭೇಟಿ ನೀಡಿ ನಡೆದ ಗಲಾಟೆ ಕುರಿತು ಮಾಹಿತಿ ಸಂಗ್ರಹಿಸಿದ್ದರು.