ತಮ್ಮ ಪರಿಚಿತ ಸ್ನೇಹಿತೆಗೆ ಫ್ರೆಂಡ್ಶಿಪ್ ಶಿಪ್ ಬ್ಯಾಂಡ್ ಕಟ್ಟಿದ್ದ ಎಂಬ ಕಾರಣಕ್ಕೆ ಯುವಕರಿಬ್ಬರು ಸೇರಿಕೊಂಡು ಮತ್ತೋರ್ವ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಹೇಮಂತ್ ಎಂದು ತಿಳಿದು ಬಂದಿದ್ದು, ಈತ ನಗರದ ಶಾರದಾದೇವಿನಗರ ನಿವಾಸಿ ಎಂದು ತಿಳಿದು ಬಂದಿದೆ. ಈತನ ಮೇಲೆ ಇಲ್ಲಿನ ಸ್ಥಳೀಯರಾದ ಸುನೀಲ್ ಹಾಗೂ ನವೀನ್ ಎಂಬ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ.
ಏನಿದು ಪ್ರಕರಣ?:
ಹೇಮಂತ್, ನಿನ್ನೆ ವಿಶ್ವ ಸ್ನೇಹಿತರ ದಿನಾಚರಣೆ ಹಿನ್ನೆಲೆಯಲ್ಲಿ ತನಗೆ ಪರಿಚಯವಿದ್ದ ಗೆಳತಿ ಕೈಗೆ ಬ್ಯಾಂಡ್ ಕಟ್ಟಿ ಶುಭಾಶಯ ಕೋರಿದ್ದ. ಆದರೆ ಇದನ್ನು ಸಹಿಸದ ಇಲ್ಲಿನ ಇಬ್ಬರು ಯುವಕರು "ನಮ್ ಏರಿಯಾಗೇ ಬಂದು, ನಮ್ ಹುಡ್ಗೀಗೇ ಬ್ಯಾಂಡ್ ಕಟ್ತೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಹೇಮಂತ್, ಸ್ನೇಹಿತೆಗೆ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟುವುದರಲ್ಲಿ ತಪ್ಪೇನಿದೆ ಎಂದು ಹೇಮಂತ್ ಪ್ರತಿಕ್ರಿಯಿಸಿದ್ದಾನೆ. ಇದರಿಂದ ಕುಪಿತಗೊಂಡ ಯುವಕರು, ಹೇಮಂತ್ ತಲೆಗೆ ರಾಡ್ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಹೇಮಂತ್ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಈ ಸಂಬಂಧ ಹೇಮಂತ್ ತಾಯಿ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.