Select Your Language

Notifications

webdunia
webdunia
webdunia
webdunia

ಬುದ್ಧಿವಾದ ಹೇಳಿದ ಮಹಿಳೆಗೆ ಅಂಗಚ್ಛೇಧಿಸಿದ ಕಿರಾತಕರು

ಬುದ್ಧಿವಾದ ಹೇಳಿದ ಮಹಿಳೆಗೆ ಅಂಗಚ್ಛೇಧಿಸಿದ ಕಿರಾತಕರು
ಬೆಂಗಳೂರು , ಶುಕ್ರವಾರ, 3 ಜುಲೈ 2015 (12:32 IST)
ಮಹಿಳೆಯೋರ್ವಳು ಜಗಳಗಂಟಿಗಳಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿದ್ದು, ಕುಪಿತಗೊಂಡ ಕಿರಾತಕರು ಆಕೆಯ ಎಡಗೈಯನ್ನೇ ಕತ್ತರಿಸಿ ಹಾಕಿರುವ ಅಮಾನುಷ ಘಟನೆ ನಗರದ ಮಾಗಡಿ ರಸ್ತೆಯ ಹೇರೋಹಳ್ಳಿಯ ಬಳಿಯ ಕೆಂಪೇಗೌಡನಗರದಲ್ಲಿ ನಡೆದಿದೆ.  
 
ಈ ದುರ್ಘಟನೆಗೆ ತುತ್ತಾದ ಮಹಿಳೆಯನ್ನು ಮಂಗಳಗೌರಿ ಎಂದು ಹೇಳಲಾಗಿದ್ದು, ನಗರ ನಿವಾಸಿಯೇ ಆಗಿದ್ದಾರೆ. ಘಟನೆಯಲ್ಲಿ ಆಕೆಯ ಎಡಗೈಯ ಅಂಗೈ ಅಕ್ಷರಶ ತುಂಡಾಗಿದ್ದು, ಕೈಯ್ಯನ್ನು ಜೋಡಿಸುವಲ್ಲಿ ವೈದ್ಯರು ಸಫಲರಾಗಿದ್ದಾರಾದರೂ ಆಕೆ ಮತ್ತೆ ಸಹಜ ಸ್ಥಿತಿಗೆ ಬರಬೇಕಾದಲ್ಲಿ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದಿದ್ದಾರೆ. 
 
ಏನಿದು ಪ್ರಕರಣ?: 
ಕೃತ್ಯಕ್ಕೊಳಗಾದ ಮಹಿಳೆ ಮಂಗಳಗೌರಿ ಅವರು ಒಟ್ಟು 5 ಮನೆಗಳಿಗೆ ಮಾಲೀಕರಾಗಿದ್ದು, ಈ ಪೈಕಿ ಒಂದನ್ನು ಚಂದ್ರು ಎಂಬುವವರಿಗೆ ಬಾಡಿಗೆ ನೀಡಿದ್ದರು. ಆದ್ದರಿಂದ ಚಂದ್ರು ಮನೆಗೆ ಕೃಷ್ಣ ಮತ್ತು ಕುಮಾರ್ ಎಂಬ ಇಬ್ಬರು ವ್ಯಕ್ತಿಗಳು ಆಗಾಗ ಬರುತ್ತಿದ್ದರು. ಅಂತೆಯೇ ನಿನ್ನೆಯೂ ಕೂಡ ಈ ಇಬ್ಬರೂ ಮನೆಗೆ ಆಗಮಿಸಿದ್ದರು. ಈ ವೇಳೆ ವಿಷಯವೊಂದಕ್ಕೆ ಸಂಬಂಧಿಸಿದಂತೆ ಮೂವರ ನಡುವೆ ಜಗಳ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮನೆ ಮಾಲೀಕೆ ಮಂಗಳಗೌರಿ ಅವರು ಇಲ್ಲಿ ಕಿತ್ತಾಡಬೇಡಿ, ಕಳಿತು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ ಎಂದು ಬುದ್ಧಿ ಮಾತನ್ನು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಕುಮಾರ್ ಹಾಗೂ ಆತನ ಗೆಳೆಯ ಕೃಷ್ಣ ನಿನ್ನೆ ಮಾಲೀಕೆಯೊಂದಿಗೂ ಕೂಡ ದಾಂಧಲೆ ನಡೆಸಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ ಬಳಿಕ ಇಬ್ಬರೂ ಸೇರಿ ಆಕೆಯ ಎಡಗೈಯನ್ನು ಮಚ್ಚಿನಿಂದ ಕತ್ತರಿಸಿ ಹಾಕಿದ್ದಾರೆ. 
 
ಘಟನೆ ಬಳಿಕ ಮಹಿಳೆ ಚೀರಿಕೊಂಡಿದ್ದಾರೆ. ಆಗ ಕೂಗನ್ನು ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ತದದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ನಗರದ ಸುಂಕದಕಟ್ಟೆಯ ಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಈ ಸಂಬಂಧ ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

Share this Story:

Follow Webdunia kannada