ಐಎಎಸ್ ಅಧಿಕಾರಿಗಳೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಉಪ್ಪಾರ ಪೇಟೆ ಪೊಲೀಸರು ನಿನ್ನೆ ಸಂಜೆ ಬಂಧಿಸಿದ್ದು, ಈ ವಿಷಯ ಪ್ರಸ್ತುತ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಪ್ರಸಾದ್(30) ಮತ್ತು ಮೋಹನ್(32) ಎಂದು ಹೇಳಲಾಗಿದ್ದು, ಎಲ್ಲಿಯವರು, ಯಾರಿಗೆ, ಎಷ್ಟು ವಂಚನೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ರಸ್ತೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ಕಂಡ ನಗರದ ಪೊಲೀಸರು, ಆರೋಪಿಗಳು ಹಾಗೂ ಅವರು ಬಳಸುತ್ತಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ವಿಧಾನಸೌಧಕ್ಕೆ ಸಂಬಂಧಿಸಿದ ಹಲವು ಸರ್ಕಾರಿ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ ಸರ್ಕಾರದ ಲಾಂಛನವನ್ನು ತಮ್ಮ ಕಾರಿನ ಮೇಲೆ ಅಳವಡಿಸಿಕೊಂಡು ಕಾರಿನ ಮೇಲೆ ಹಿಂದುಳಿದ ಅಲ್ಪಸಂಖ್ಯಾತ ಸೇವಾ ಸಂಸ್ಥೆಯ ಉಪಾಧ್ಯಕ್ಷರು ಎಂದೂ ಕೂಡ ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು.
ಬಳಿಕ, ನಾನು ಐಎಎಸ್ ಅಧಿಕಾರಿಯಾಗಿದ್ದು, ನಿಮಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಕೆಲ ಸರ್ಕಾರಿ ದಾಖಲೆಗಳನ್ನು ಬಳಸಿಕೊಳ್ಳುತ್ತಿದ್ದರು. ಅಲ್ಲದೆ ಆರೋಪಿಗಳಲ್ಲಿ ಪ್ರಮುಖವಾಗಿ ಪ್ರಸಾದ್ ಪಾತ್ರವಿದ್ದು, ಪ್ರಸಾದ್ಗೆ ಮೋಹನ್ ಸಹಕರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೂಡ ವಶಕ್ಕೆ ಪಡೆದಿರುವುದಾಗಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.