ಡಾ. ರಾಜ್ ಕುಮಾರ್ ಅವರ ಸ್ಮರಣಾರ್ಥ ನಗರದಲ್ಲಿ ನಿರ್ಮಾಣಗೊಂಡಿರುವ ರಾಜ್ ಸ್ಮಾರಕ ನಾಳೆ ಲೋಕಾರ್ಪಣೆಗೊಳ್ಳುತ್ತಿದ್ದು, ಕಾಲಿವುಡ್ನ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಟಾಲಿವುಡ್ನ ಖ್ಯಾತ ನಟ, ಮಾಜಿ ಕೇಂದ್ರ ಸಚಿವ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಎಲ್ಲಾ ಗಣ್ಯರಿಗೂ ಕೂಡ ಕನ್ನಡ ಚಲನಚಿತ್ರ ರಂಗ ಹಾಗೂ ರಾಜ್ಯ ವಾಣಿಜ್ಯ ಮಂಡಳಿ ವತಿಯಿಂದ ಈಗಾಗಲೇ ಆಹ್ವಾನ ನೀಡಲಾಗಿದ್ದು, ಬಾಲಿವುಡ್ನ ಖ್ಯಾತ ನಟ ಅಮಿತಾ ಬಚ್ಚನ್, ತಮಿಳು ಚಿತ್ರನಟ ರಜನಿಕಾಂತ್ ಹಾಗೂ ತೆಲುಗು ನಟ ಚಿರಂಜೀವಿ ಅವರು ಆಹ್ವಾನದಲ್ಲಿ ಪ್ರಮುಖರಾಗಿದ್ದು, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವು ನಾಳೆ ಬೆಳಗ್ಗೆ 10.30ರಿಂದ ಆರಂಭಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ನಟ ರಜನಿಕಾಂತ್, ರಾಜ್ ಜೀವನ ಚರಿತ್ರೆ ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಿದರೆ, ನಟ ಚಿರಂಜೀವಿ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಹಿಂದಿ ಚಿತ್ರನಟ ಅಮಿತಾ ಬಚ್ಚನ್ ಅವರು ಗೈರು ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರ್ಯಕ್ರಮದ ಭದ್ರತೆಗಾಗಿ 2500 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ವೇದಿಕೆ ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜ್ ಅವರ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.