ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರಕಾರದ ಧೋರಣೆಯನ್ನು ಖಂಡಿಸಿ ಇವತ್ತು ಸಂಪೂರ್ಣ ಕರ್ನಾಟಕ ಬಂದ್ ಘೋಷಿಸಲಾಗಿದೆ.ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ರಾಜ್ಯ ಬಂದ್ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆ ಆರು ಗಂಟೆಯಿಂದಲೇ ಬಂದ್ ಪ್ರಾರಂಭವಾಗಿದ್ದು ಸಂಜೆ 6 ಗಂಟೆವರೆಗೆ ಮುಂದುವರೆಯಲಿದೆ.
ಬಂದ್ಗೆ ಸುಮಾರು 500ಕ್ಕೂ ಹೆಚ್ಚು ಸಂಘಟನೆಗಳು ಸಮರ್ಥನೆ ನೀಡಿವೆ. ಬಹುತೇಕ ಹೋಟೆಲ್ಗಳು, ಸಿನಿಮಾ ಮಂದಿರಗಳು, ಮಾಲ್ಗಳು, ಬಂಕ್ಗಳು, ಜ್ಯುವೆಲ್ಲರಿ ಶಾಪ್ಗಳು ತೆರೆಯಲ್ಪಡುವುದಿಲ್ಲ. ಆದರೆ ರೈಲು ಸಂಚಾರ, ಅಂಬ್ಯುಲೆನ್ಸ್, ಮೆಡಿಕಲ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿದ್ದು ಹಾಲು ಪೂರೈಕೆಯಾಗಲಿದೆ.
ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರಿನಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಮನಗರದ ಐಜೂರು ಸರ್ಕಲ್ ಬಳಿ ಧರಣಿ ನಡೆಸುತ್ತಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿತು. ಜತೆಗೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಮಾಜಿ ಸಿಎಂ ಜಯಲಲಿತಾ ಪ್ರತಿಕೃತಿ ದಹಿಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ಶನಿವಾರ ನಿಗದಿಯಾಗಿದ್ದ ಪದವಿ, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.