ತಾಂಜಾನಿಯಾ ಮೂಲದ ಯುವತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಯುವತಿಯ ಸ್ನೇಹಿತ ಮಾಹಿತಿ ನೀಡಿದ್ದು, ಘಟನೆ ದಿನ ನನ್ನಿಬ್ಬರು ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದರು. ಸೂಡಾನ್ ವಿದ್ಯಾರ್ಥಿಯ ಮೇಲೆ ಜನರ ಗುಂಪೊಂದು ಹಲ್ಲೆ ಮಾಡುತ್ತಿರುವುದನ್ನು ನೋಡಿ ನನ್ನ ಸ್ನೇಹಿತ ಕಾರನ್ನು ನಿಲ್ಲಿಸಿ ಕೆಳಗಿಳಿದು ಯಾಕೆ ಹೊಡೆಯುತ್ತೀರೆಂದು ಕೇಳಿದ.
ಆಗ ಜನರ ಗುಂಪು ಈತ ಕೂಡ ಸೂಡಾನ್ ವಿದ್ಯಾರ್ಥಿ ಎಂದು ಭಾವಿಸಿ ಅವನಿಗೂ ಥಳಿಸಿದೆ. ಅಲ್ಲಿದ್ದ ಕೆಲವರು ಅವನ ರಕ್ಷಣೆಗೆ ಧಾವಿಸಿದ ಸ್ನೇಹಿತೆಯ ಮೇಲೂ ಹಲ್ಲೆ ಮಾಡಿ ಅವಳ ಟಾಪ್ ಹರಿದುಹಾಕಿದರು. ಬಳಿಕ ಕಾರಿಗೆ ಬೆಂಕಿಹಚ್ಚಿ ಸುಟ್ಟುಹಾಕಿದರು. ಆಗ ನನ್ನ ಸ್ನೇಹಿತೆ ತಪ್ಪಿಸಿಕೊಂಡು ನಿಧಾನವಾಗಿ ಚಲಿಸುತ್ತಿದ್ದ ಬಸ್ವೊಂದರಲ್ಲಿ ಏರಿದಾಗ ಬಸ್ನಲ್ಲಿದ್ದವರನ್ನು ಅವಳನ್ನು ಹೊರಕ್ಕೆ ತಳ್ಳಿದರು.
ಆಗ ಅಲ್ಲಿಗೆ ಆಗಮಿಸಿದ ಗುಂಪು ಯುವತಿಯನ್ನು ಮತ್ತೆ ಥಳಿಸತೊಡಗಿತು ಎಂದು ಯುವಕ ಮಾಹಿತಿ ನೀಡಿದ. ಬರೀ ಇದು ಒಂದು ಘಟನೆ ಎಂದು ಹೇಳಲಾಗದು. ವಿದೇಶಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮಗೆ ಈಗಲೂ ಹೊರಗಡೆ ತೆರಳಲು ಭಯವಾಗುತ್ತಿದೆ. ನಮ್ಮ ದೇಶದಲ್ಲಿ ಇಂತಹ ಭಯದ ವಾತಾವರಣವಿಲ್ಲ ಎಂದು ಯುವಕ ಹೇಳಿಕೆ ನೀಡಿದ್ದಾನೆ.