ಕಳ್ಳತನ ಮಾಡಲು ಹೋಗಿ ಹಿಂತಿರುಗುತ್ತಿದ್ದ ಕಳ್ಳರು ಪೊಲೀಸ್ ಜೀಪನ್ನೇ ನಿಲ್ಲಿಸಿ ಡ್ರಾಪ್ ಕೇಳಿ ಸಿಕ್ಕಿಬಿದ್ದ ಘಟನೆ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ.
7 ಜನರ ಕಳ್ಳರ ಗುಂಪೊಂದು ಭಾನುವಾರ ರಾತ್ರಿ ತೂದೂರಿ ಪೋಸ್ಟ್ ಆಫೀಸ್ನಲ್ಲಿ ಕಳ್ಳತನಕ್ಕೆ ಹವಣಿಸಿದ್ದರು. ಆದರೆ ಅಲ್ಲಿ ಅವರಿಗೆ ಏನು ಎಟಕಲಿಲ್ಲ. ಹೀಗಾಗಿ ಅಲ್ಲೇ ಪಕ್ಕದಲ್ಲಿದ್ದ ಡಿಸಿಸಿ ಬ್ಯಾಂಕಿನ ಬಾಗಿಲು ಒಡೆದು ಅಲ್ಲಿನ ತಿಜೋರಿ ಒಡೆಯಲು ಪ್ರಯತ್ನಿಸಿದರು. ಆದರೆ ಅದೃಷ್ಟ ಅಲ್ಲೂ ಕೈಕೊಟ್ಟಿತು. ಇದರಿಂತ ಬೇಸತ್ತ ಅವರು ಹಿಂತಿರುಗಲು ನಿರ್ಧರಿಸಿದರು.
ರಸ್ತೆ ಬಳಿ ಬಂದು ವಾಹನವೊಂದಕ್ಕೆ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆದರೆ ಕತ್ತಲಲ್ಲಿ ಅವರಿಗೆ ಅದು ಪೊಲೀಸ್ ವಾಹನ ಎಂಬುದು ಗೊತ್ತಾಗಲಿಲ್ಲ. ಗೊತ್ತಾದ ಕೂಡಲೇ ಜೀಪಿನಿಂದ ಜಿಗಿದು ಓಡಲು ಪ್ರಾರಂಭಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರ ಹಿಂದೆ ಓಡಿದ್ದಾರೆ.
ಮೂವರು ಕಳ್ಳರು ಪೊಲೀಸರ ಕೈ ಸಿಕ್ಕಿ ಹಾಕಿಕೊಂಡರೆ ಮತ್ತೆ ನಾಲ್ವರು ಪರಾರಿಯಾಗಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ನಾಲ್ವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಗುಂಪು ನದಿಯ ದಡದಲ್ಲಿ ಬೀಡು ಬಿಟ್ಟಿತ್ತು. ಗ್ರಾಮಸ್ಥರು ಕೂಲಿ ಕಾರ್ಮಿಕರಿರಬೇಕೆಂದು ಸುಮ್ಮನಾಗಿದ್ದರು ಎಂದು ತಿಳಿದು ಬಂದಿದೆ.